ಅಲಿಗಢ: ಪೊಲೀಸ್ ಅಧಿಕಾರಿಯೊಬ್ಬರು ಸಿಡಿಸಿದ ಗುಂಡಿನಿಂದ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಡಿಸೆಂಬರ್ 8ರಂದು ಇಶ್ರತ್ ಜಹಾನ್ ತಮ್ಮ ಮಗನೊಂದಿಗೆ ಅಲಿಗಢ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದಿದ್ದರು. ಪಾಸ್ಪೋರ್ಟ್ ಪರಿಶೀಲನೆಗೆ ಕಾಯುತ್ತಾ ಸರದಿಯಲ್ಲಿ ನಿಂತಿದ್ದರು. ಈ ವೇಳೆ ಅಲ್ಲೇ ನಿಂತಿದ್ದ ಮನೋಜ್ ಶರ್ಮಾ ಎಂಬ ಪೊಲೀಸ್ ಅಧಿಕಾರಿ ಕಾನ್ಸ್ಟೆಬಲ್ ಒಬ್ಬರಿಂದ ಪಿಸ್ತೂಲ್ ಪಡೆದು ಲೋಡ್ ಮಾಡಿ ಟ್ರಿಗರ್ ಎಳೆದಿದ್ದಾರೆ. ಈ ವೇಳೆ ಸಿಡಿದ ಗುಂಡು ನೇರವಾಗಿ ಇಶ್ರತ್ ತಲೆಗೆ ಹೊಕ್ಕಿತ್ತು.
ಗುಂಡೇಟಿನಿಂದ ಕುಸಿದು ಬಿದ್ದ ಇಶ್ರತ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದ 7 ದಿನಗಳ ನಂತರ ಮಹಿಳೆ ಮೃತಪಟ್ಟಿದ್ದಾರೆ.
‘ಘಟನೆ ನಂತರ ಪೊಲೀಸ್ ಅಧಿಕಾರಿ ಮನೋಜ್ ಶರ್ಮಾ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿದೆ’ ಎಂದು ಅಲಿಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ತಿಳಿಸಿದ್ದಾರೆ.
‘ಪೊಲೀಸ್ ಅಧಿಕಾರಿಯನ್ನು ಹಿಡಿದುಕೊಟ್ಟವರಿಗೆ ₹20 ಸಾವಿರ ಬಹುಮಾನ ಘೋಷಿಸಿದ್ದು, ಎಲ್ಲ ದಿಕ್ಕಿನಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದರು.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಅಧಿಕಾರಿಯ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.