ನುಹ್, ಹರಿಯಾಣ: ಪೂಜಾ ಕಾರ್ಯಕ್ಕೆ ತೆರಳುತ್ತಿದ್ದ ಮಹಿಳೆಯರ ಮೇಲೆ ಅಪರಿಚಿತರು ಗುರುವಾರ ರಾತ್ರಿ ಕಲ್ಲುಗಳನ್ನು ತೂರಿದ್ದು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ಮಸೀದಿಯಿಂದ ಕಲ್ಲು ತೂರಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಕುರಿತು ಯಾವುದೇ ದೂರು ಬಂದಿಲ್ಲ. ಆದರೆ, ನಿಯಮಗಳ ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಸೀದಿಯೊಂದರ ಸಮೀಪ ರಾತ್ರಿ 8.20 ಗಂಟೆಗೆ ಕೃತ್ಯ ನಡೆದಿದೆ. ‘ಕುಆನ್ ಪೂಜಾನ್’ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಹಿಳೆಯರ ಗುಂಪನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ನರೇಂದರ್ ಬಿಜಾರ್ಣಿಯ ನೇತೃತ್ವದಲ್ಲಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನುಹ್ ಠಾಣೆಯ ಅಧಿಕಾರಿ ಓಂಬೀರ್ ಪ್ರಕಾರ, ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು.
ಆರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ವಿಎಚ್ಪಿ ಕೈಗೊಂಡಿದ್ದ ಬ್ರಜ್ ಮಂಡಲ ಯಾತ್ರೆ ವೇಳೆ ಗುಂಪು ದಾಳಿ ನಡೆದಿದ್ದು, ಹಿಂಸೆಗೆ ತಿರುಗಿತ್ತು. ಆಗ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ, ಮದರಸಾದ ಮೌಲ್ವಿ ಸೇರಿ ಆರು ಜನರು ಸತ್ತಿದ್ದರು.