ಲಖನೌ: ಮುಂಬೈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೊನೆಯುಸಿರೆಳೆದ ಅರುಣಾ ಶಾನಭಾಗ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸೋಹನ್ಲಾಲ್ ಭಾರ್ತಿಗೆ ಆತನ ಗ್ರಾಮ ಮತ್ತು ಸಮುದಾಯ ಬೆಂಬಲಕ್ಕೆ ನಿಂತಿದೆ.
ಭಾರ್ತಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಗ್ರಾಮದೊಳಗೆ ಪ್ರವೇಶಿಸದಂತೆ ನಿರ್ಭಂದ ಹೇರಲಾಗಿದೆ. ಈ ಎಚ್ಚರಿಕೆಯ ಹೊರತಾಗಿಯೂ ಗ್ರಾಮವನ್ನು ಪ್ರವೇಶಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಕಲ್ಲಿನಿಂದ ಹೊಡೆಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶದ ಹಪುರ್ ಜಿಲ್ಲೆಯ ಪರ್ಪಾ ಗ್ರಾಮದಲ್ಲಿ ನಡೆದ ವಾಲ್ಮೀಕಿ ಸಮುದಾಯದ ಪಂಚಾಯ್ತಿಯಲ್ಲ್ಲಿ ‘ಭಾರ್ತಿ ತನ್ನ ತಪ್ಪಿಗಾಗಿ ಈಗಾಗಲೇ ದಂಡ ತೆತ್ತಿದ್ದಾಗಿದೆ. 42 ವರ್ಷಗಳ ಹಿಂದೆ ಏನು ನಡೆದಿತ್ತು ಎಂಬುದು ನಮಗೂ ಗೊತ್ತಿಲ್ಲ’ ಎಂದು ಮುಖಂಡರು ಹೇಳಿದರು.
ಈಗಾಗಲೇ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದ್ದರೂ ಆತನನ್ನು ಗುರಿಯಾಗಿಸಿಕೊಂಡು ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ವಿರುದ್ಧ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಹರಿಹಾಯ್ದಿದ್ದಾರೆ.
ಭಾರ್ತಿಗೆ ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿದ ಪಂಚಾಯ್ತಿ ಮುಖ್ಯಸ್ಥರು, ಆತನನ್ನು ಗ್ರಾಮದಿಂದ ಹೊರ ಹಾಕಿರುವ ಮಾಧ್ಯಮಗಳ ವರದಿ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.