ಮೆದಕ್/ಹೈದರಾಬಾದ್: ನಜ್ಜುಗುಜ್ಜಾದ ಶಾಲಾ ವಾಹನ, ಅವಶೇಷಗಳ ಮೇಲೆಲ್ಲ ರಕ್ತದ ಕಲೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ಚೀಲಗಳು, ತಿಂಡಿ ಡಬ್ಬಗಳು, ಪುಸ್ತಕಗಳು, ಇನ್ನೊಂದೆಡೆ, ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆರ್ತನಾದ...
ಅಪಘಾತದ ಸ್ಥಳದಲ್ಲಿನ ಈ ದೃಶ್ಯಗಳು ಕರುಳು ಹಿಂಡುವಂತಿದ್ದವು. ಸುದ್ದಿ ತಿಳಿದಿದ್ದೇ ತಡ ಕಿಷ್ಟಾಪುರ ಗ್ರಾಮದ ವಲಿಯುದ್ದಿನ್ ಸುಮಾರು ಮೂರು ಕಿ.ಮೀ ಓಡಿಕೊಂಡೇ ಸ್ಥಳಕ್ಕೆ ಹೋದರು. ತಮ್ಮ ಮಕ್ಕಳಾದ ಗೌಸಿಯಾ (4) ಹಾಗೂ ಅಬ್ದುಲ್ ರಶೀದ್ (6) ಶವಗಳನ್ನು ನೋಡಿ ಅವರು ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಸೇರಿಸ
ಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು.
ಗುಂಡರೆಡ್ಡಿಪಲ್ಲಿ, ಯಾದಗಿರಿ, ಇಸ್ಲಾಂಪುರ, ಘಾನ್ಪುರ, ವೆಂಕಟಯ್ಯಪಲ್ಲಿ, ಗುಂಡೆಂಟಿ ಪಲ್ಲಿ, ಚೆಟ್ಲತಿಮ್ಮಯ್ಯಪಲ್ಲಿ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ.
₨ 2 ಲಕ್ಷ ಪರಿಹಾರ: ಮೃತರ ಕುಟುಂಬಕ್ಕೆ ರೈಲ್ವೆ ಸಚಿವಾಲಯ ತಲಾ₨ 2 ಲಕ್ಷ ಹಾಗೂ ತೆಲಂಗಾಣ ಸರ್ಕಾರ ತಲಾ ₨ 5 ಲಕ್ಷ ಪರಿಹಾರ ಘೋಷಿಸಿವೆ. ಸಂಸತ್ನ ಉಭಯ ಸದನಗಳಲ್ಲಿಯೂ ಈ ಕುರಿತು ಹೇಳಿಕೆ ನೀಡಿದ ರೈಲ್ವೆ ಸಚಿವ ಸದಾನಂದ ಗೌಡ, ‘ಗಂಭೀರವಾಗಿ ಗಾಯಗೊಂಡವರಿಗೆ ತಲಾ ₨ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ ₨ 20,000 ಪರಿಹಾರ
ನೀಡಲಾಗುತ್ತದೆ’ ಎಂದರು.