ಜಲಂಧರ್ : ಬಾಯಾರಿ ನೀರಿಗಾಗಿ ಪರಿತಪಿಸುತ್ತಾ ಭಾರತದ ಗಡಿ ಪ್ರವೇಶಿಸಿದ್ದ ಆ ಬಾಲಕನಿಗೆ ದೇಶ, ಗಡಿ ಯಾವುದರ ಪರಿವೆಯೇ ಇರಲಿಲ್ಲ! ಹೀಗೆ ನೀರು ಹುಡುಕುತ್ತಾ ಪಂಜಾಬ್ನ ದೋನಾ ತೆಲು ಮಲ್ ಗಡಿ ತಪಾಸಣಾ ಕೇಂದ್ರದ ಬಳಿಗೆ ಆಕಸ್ಮಿಕವಾಗಿ ಬಂದ 12 ವರ್ಷದ ಬಾಲಕನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಪಾಕಿಸ್ತಾನ ಅಧಿಕಾರಿಗಳಿಗೆ ಮರಳಿಸಿದ ಘಟನೆ ಇಲ್ಲಿ ನಡೆದಿದೆ.
ಬಾಲಕನನ್ನು ಮೊಹಮದ್ ತನ್ವೀರ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಕಸೂರ್ ಜಿಲ್ಲೆಯ ಧರಿ ಗ್ರಾಮದವನು ಎನ್ನಲಾಗಿದೆ. ‘ತುಂಬಾ ಬಾಯಾರಿಕೆಯಾಗಿದ್ದರಿಂದ ಕುಡಿಯಲು ನೀರು ಹುಡುಕಿ ಹೊರಟಿದ್ದೆ. ಈ ವೇಳೆ ತಿಳಿಯದೆ ಗಡಿ ಪ್ರವೇಶಿಸಿದ್ದಾಗಿ’ ಬಾಲಕ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಬಾಲಕನನ್ನು ಭಾನುವಾರ ರಾತ್ರಿಯಿಡೀ ಸೇನಾ ಶಿಬಿರದಲ್ಲಿ ಇರಿಸಿಕೊಂಡು ಆರೈಕೆ ಮಾಡಲಾಯಿತು. ಮಾನವೀಯ ದೃಷ್ಟಿಯಿಂದ ಸೋಮವಾರ ಪಾಕಿಸ್ತಾನ ಸೇನಾ ಅಧಿಕಾರಿಗಳನ್ನು ಸಂಪರ್ಕಿಸಿ ಬಾಲಕನನ್ನು ಹಸ್ತಾಂತರಿಸಲಾಯಿತು’ ಎಂದಿದ್ದಾರೆ.