ನವದೆಹಲಿ: ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಅಷ್ಟೇನೂ ತೃಪ್ತಿ ಹೊಂದಿರದ ಆರ್ಎಸ್ಎಸ್, ಅವರ ಸದ್ಭಾವನಾ ಉಪವಾಸದ ಬಗ್ಗೆಯೂ ಸಹಮತ ಹೊಂದಿರಲಿಲ್ಲ.
ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಗುಜರಾತ್ ಘಟಕದ ಮುಖ್ಯಸ್ಥರೂ ಆಗಿರುವುದರಿಂದ ಉಪವಾಸ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಸಂಘ ಪರಿವಾರದ ಅಂಗ ಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ತಿನ ಪ್ರತಿನಿಧಿಗಳ್ಯಾರೂ ಭಾಗವಹಿಸಲಿಲ್ಲ.
ಸ್ಥಳಕ್ಕೆ ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಆಹ್ವಾನಿಸಿ ಅಲ್ಲಿ `ಅಲ್ಲಾ ಹೋ ಅಕ್ಬರ್~ ಎಂಬ ಘೋಷಣೆ ಕೂಗಿದ್ದರ ಬಗ್ಗೆ ಆರ್ಎಸ್ಎಸ್ನ ಅನೇಕರಿಗೆ ಅಸಮಾಧಾನವಿದೆ ಎನ್ನಲಾಗಿದೆ.
ಮೋದಿ ಈ ವಿಚಾರ ಗೊತ್ತಾಗಿಯೇ ಸೈಯ್ಯದ್ ಇಮಾಮ್ ಶಾಹಿ ಸಯ್ಯದ್ ಅವರು ನೀಡಿದ ಟೋಪಿಯನ್ನು ಧರಿಸದೆ ಅವರು ನೀಡಿದ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ಆರ್ಎಸ್ಎಸ್ ಮುಖಂಡರನ್ನು ಸಮಾಧಾನ ಪಡಿಸಲು ಯತ್ನಿಸಿದರು ಎಂದು ಹೇಳಲಾಗುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ಅವರು ಸಕ್ರಿಯರಾಗುವುದಕ್ಕೆ ಆರ್ಎಸ್ಎಸ್ ವಿರೋಧವಿಲ್ಲ. ಆದರೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ರೀತಿಯಲ್ಲಿ ಮುಸ್ಲಿಮರನ್ನು ಓಲೈಸುವುದು ಬೇಡ ಎಂಬ ಅಭಿಪ್ರಾಯವಿದೆ ಎನ್ನಲಾಗಿದೆ.