ನವದೆಹಲಿ(ಪಿಟಿಐ): ದುರಂತಕ್ಕೀಡಾದ ಇಟಲಿಯ `ಕೋಸ್ಟಾ ಕಾನ್ ಕಾರ್ಡಿಯಾ~ ಹಡಗಿನಿಂದ ರಕ್ಷಿಸಲಾದ 201 ಭಾರತೀಯರಲ್ಲಿ ಮೊದಲ ತಂಡ ಗುರುವಾರ ಇಲ್ಲಿಗೆ ಬಂದಿಳಿಯಿತು.
12 ಜನರ ಈ ತಂಡ ಎಮಿರೆಟ್ಸ್ ವಿಮಾನದಲ್ಲಿ ದುಬೈ ಮುಲಕ ಇಲ್ಲಿಗೆ ಆಗಮಿಸಿತು. ಇಲ್ಲಿಗೆ ಆಗಮಿಸಿದವರಲ್ಲಿ 6 ಜನ ಗೋವಾದವರಾಗಿದ್ದರೆ, ಇತರರು ರಾಜಸ್ತಾನ, ಹಿಮಾಚಲ ಪ್ರದೇಶದವರು. ಗುರುವಾರ 72 ಮಂದಿ ಬಂದಿದ್ದಾರೆ. ಶುಕ್ರವಾರ ಇನ್ನೂ 125 ಮಂದಿ ಇಲ್ಲಿಗೆ ಆಗಮಿಸಲಿದ್ದಾರೆ.
ರಾಜಸ್ತಾನದ ಹಿರುವಾ ಗ್ರಾಮದ ಮುಖೇಶ್ ಕುಮಾರ್ `ಆ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ. ನೆನಪಿಸಿಕೊಂಡು ಹೇಳಲು ಪದಗಳೇ ಸಿಗುತ್ತಿಲ್ಲ~ ಎಂದೂ ನುಡಿದರು.
ಇಲ್ಲಿಗೆ ಬಂದಿಳಿದವರನ್ನು ಸ್ವಾಗತಿಸಲು ಕೆಲವರ ಕುಟುಂಬವರ್ಗ ಸೇರಿದ್ದು, ಅದು ಹೃದಯಸ್ಪರ್ಶಿ ದೃಶ್ಯವಾಗಿತ್ತು.
ದುರಂತಕ್ಕೀಡಾದ ಹಡಗಿನಲ್ಲಿದ್ದ ಭಾರತೀಯರ ಬಗ್ಗೆ ಸಮರ್ಪಕ ಮಾಹಿತಿಗಳನ್ನು ನೀಡಲು ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಸಹಾಯಕ ಕಚೇರಿಗಳನ್ನು ತೆರಯಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತೀಯ ಸಿಬ್ಬಂದಿಗೆ ಸಂಬಂಧಿಸಿದ ಕಂಪೆನಿಗಳಿಂದ ಬಾಕಿ ವೇತನ ಬರಬೇಕಾಗಿದೆ.ಹೀಗಾಗಿ ಕಷ್ಟದಲ್ಲಿರುವ ಸಿಬ್ಬಂದಿಗೆ ನೆರವು ನೀಡಲು ತೆರಳಿದ ಭಾರತೀಯ ಅಧಿಕಾರಿಗಳ ನಿಯೋಗ ಪ್ರತಿಯೊಬ್ಬರಿಗೆ ತಲಾ 100 ಯೂರೊ ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.