ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ ಗೋರಖಪುರದ ಬಿಆರ್ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ಸಾವಿನ ಸರಣಿ ಮತ್ತೆ ಮುಂದುವರಿದಿದೆ.
ನಾಲ್ಕು ದಿನಗಳಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿನ(ಎನ್ಐಸಿಯು) 29 ಮಕ್ಕಳು ಸೇರಿದಂತೆ 55 ಮಕ್ಕಳು ಮೃತಪಟ್ಟಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಕ್ಕಳು ಮೆದುಳಿನ ಉರಿಯೂತ(ಎನ್ಸೆಫಾಲಿಟಿಸ್) ಮತ್ತು ಇತರ ರೋಗಗಳಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ, ನ. 1ರಿಂದ 3ರವರೆಗೆ ಎನ್ಐಸಿಯುಗೆ 65 ಮಕ್ಕಳನ್ನು ದಾಖಲಿಸಲಾಗಿತ್ತು. ಅದರಲ್ಲಿ 22 ಮಕ್ಕಳು ಮೃತಪಟ್ಟಿದ್ದಾರೆ. ಇದೇ ವೇಳೆ ಮಕ್ಕಳ ಐಸಿಯು ವಿಭಾಗಕ್ಕೆ 178 ಮಕ್ಕಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದರಲ್ಲಿ 21 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ವರ್ಷ ಜನವರಿಯಿಂದ ಈ ವರೆಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು 1,900 ಮಕ್ಕಳು ವಿವಿಧ ವೈದ್ಯಕೀಯ ಕಾರಣಗಳಿಂದ ಮೃತಪಟ್ಟಿದ್ದಾರೆ ಅದರಲ್ಲಿ ಹೆಚ್ಚಾಗಿ ಮೆದುಳು ಉರಿಯೂತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.