ನವದೆಹಲಿ (ಪಿಟಿಐ): ಬಿಜೆಪಿ ವರಿಷ್ಠರು ಶನಿವಾರ ಉತ್ತರಾಖಂಡ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯ ಸರ್ಕಾರವು ಹಗರಣ ನಡೆಸಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪೋಖ್ರಿಯಾಲ್ ಅವರಿಗೆ ಸೂಚಿಸಿದ್ದಾರೆ.
`ಮುಖ್ಯಮಂತ್ರಿ ಹುದ್ದೆಯಿಂದ ಪೋಖ್ರಿಯಾಲ್ ಕೆಳಗಿಳಿಯುವ ಕಾಲ ಸನ್ನಿಹಿತವಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸೆ. 8ರಂದು ಸಭೆ ಸೇರಿ ಉತ್ತರಾಖಂಡದಲ್ಲಿ ಪಕ್ಷದ ಭವಿಷ್ಯದ ಕುರಿತಂತೆ ಚರ್ಚಿಸಿದ್ದು, ಅಲ್ಲಿ ನಾಯಕತ್ವ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿತ್ತು~ ಎಂದು ಮೂಲಗಳು ತಿಳಿಸಿವೆ.
ಪೋಖ್ರಿಯಾಲ್ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಸಿ. ಖಂಡೂರಿ ಅವರನ್ನು ತರುವ ಕುರಿತು ಅದು ನಿರ್ಧರಿಸಿದೆ. ವಿಧಾನಸಭಾ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಯಾವುದೇ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಲು ಬಯಸದ ಬಿಜೆಪಿ ಪೋಖ್ರಿಯಾಲ್ ಗೌರವಯುತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಹಿರಿಯ ಮುಖಂಡರು ತಮ್ಮ ನಿರ್ಧಾರವನ್ನು ತಿಳಿಸಿದ ಬಳಿಕ, ಪೋಖ್ರಿಯಾಲ್ ರಾಜೀನಾಮೆ ನೀಡುವ ಪ್ರಸ್ತಾವವನ್ನು ಮುಂದಿಟ್ಟರು ಎಂದು ಅನಧಿಕೃತ ಮೂಲಗಳು ತಿಳಿಸಿವೆ.
ಪೋಖ್ರಿಯಾಲ್ ಅವರ ಸಾಧನೆಯು ಅಷ್ಟೊಂದು ತೃಪ್ತಿಕರವಾಗಿಲ್ಲ ಮತ್ತು ಹಗರಣಗಳಿಂದಾಗಿ ರಾಜ್ಯದಲ್ಲಿ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದೂ ಮೂಲಗಳು ತಿಳಿಸಿವೆ.