ನವದೆಹಲಿ: ಎನ್ಡಿಎ ಮೈತ್ರಿಕೂಟ ತ್ಯಜಿಸಿರುವ ಟಿಡಿಪಿ ನಿರ್ಧಾರ ದುರದೃಷ್ಟಕರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ಶಾ, ‘ಮೈತ್ರಿ ತ್ಯಜಿಸುವ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯವಾಗಿ ಕೈಗೊಂಡದ್ದಾಗಿದೆ’ ಎಂದು ಹೇಳಿದ್ದಾರೆ. ಟಿಡಿಪಿಯ ನಿರ್ಧಾರ ಕೇವಲ ರಾಜಕೀಯ ಹಿತಾಸಕ್ತಿಯಿಂದ ಕೈಗೊಂಡದ್ದಾಗಿತ್ತು ಎಂದೂ ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರ ಪ್ರದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಯಾವತ್ತೂ ಕ್ರಮ ಕೈಗೊಂಡಿದ್ದಾರೆ ಎಂದೂ ಶಾ ಹೇಳಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಟಿಡಿಪಿ ಇತ್ತೀಚೆಗೆ ಎನ್ಡಿಎ ಮೈತ್ರಿಕೂಟ ತ್ಯಜಿಸಿತ್ತು. ಬಜೆಟ್ನಲ್ಲೂ ರಾಜ್ಯ ಸರ್ಕಾರವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿತ್ತು.