ನವದೆಹಲಿ (ಪಿಟಿಐ): ದೇಶದೆಲ್ಲೆಡೆ ಪೊಲೀಸ್ ಪಡೆಗಳು ಸಾರ್ವಜನಿಕ ಪ್ರತಿಭಟನೆಗಳನ್ನು ನಿರ್ವಹಿಸುವಾಗ ತಮ್ಮ ಕಾರ್ಯವೈಖರಿಯನ್ನು ಪುನರ್ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು ಮತ್ತು ಕಲ್ಲು ತೂರಾಟ ಮತ್ತಿತರ ನಾಗರಿಕ ಗಲಭೆಗಳನ್ನು ನಿಯಂತ್ರಿಸುವಾಗ ಮಾರಣಾಂತಿಕವಲ್ಲದ ವಿಧಾನಗಳನ್ನು ಮಾತ್ರ ಪ್ರಯೋಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸೂಚಿಸಿದರು.
`ಭದ್ರತಾ ಪಡೆಗಳು ಆಗಾಗ ಎದುರಿಸುತ್ತಿರುವ ಸವಾಲುಗಳೆಂದರೆ, ನಾಗರಿಕ ಗಲಭೆಗಳನ್ನು ಹೇಗೆ ನಿರ್ವಹಣೆ ಮಾಡುವುದು ಮತ್ತು ಇದನ್ನು ನಿಯಂತ್ರಿಸಲು ಎಷ್ಟು ಪಡೆಗಳನ್ನು ಬಳಸಬೇಕು ಎಂಬುದಾಗಿದೆ~ ಎಂದು ಅವರು ತಿಳಿಸಿದರು.
ಸಚಿವರು ಗುರುವಾರ ಇಲ್ಲಿ ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ಕಲ್ಲು ತೂರಾಟ ಮತ್ತು ಹಿಂಸಾತ್ಮಕ ಗಲಭೆಯನ್ನು ಪ್ರಸ್ತಾಪಿಸಿ ಮಾತನಾಡಿದರು.