ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗಡಿಜಿಲ್ಲೆ ಕುಪ್ವಾರಕ್ಕೆ ಶುಕ್ರವಾರ ಭೇಟಿ ನೀಡಿ, ಸ್ಥಳೀಯರ ಜೊತೆ ಮತುಕತೆ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಅವರು ಉಪಸ್ಥಿತರಿದ್ದರು.
ಕಣಿವೆ ರಾಜ್ಯದ ಪ್ರವಾಸದಲ್ಲಿರುವ ರಾಜನಾಥ್ ಅವರನ್ನು ಸ್ಥಳೀಯರ ನಿಯೋಗ ಹಾಗೂ ಗಡಿಯಲ್ಲಿ ವಾಸಿಸುತ್ತಿರುವ ಜನರು ಭೇಟಿ ಮಾಡಿದರು. ಹುತಾತ್ಮರ ಸ್ಮಾರಕಕ್ಕೆ ತೆರಳಿದ ರಾಜನಾಥ್ ಗೌರವ ಸಲ್ಲಿಸಿದರು.
ಸರ್ಕಾರ ಜಮ್ಮುವಿನಿಂದ ಜನರನ್ನು ಕರೆಸಿದೆ–ಕಾಂಗ್ರೆಸ್ ಆರೋಪ: ರಾಜನಾಥ್ ಸಿಂಗ್ ಭಾಗಿಯಾದ ಕಾರ್ಯಕ್ರಮ ಯಶಸ್ವಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಮ್ಮುವಿನಿಂದ 800 ಯುವಕರನ್ನು ಕರೆಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಏನನ್ನೂ ಮುಚ್ಚಿಡದೆ, ರಾಜ್ಯದ ವಸ್ತುಸ್ಥಿತಿಯ ಚಿತ್ರಣವನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ರವೀಂದರ್ ಶರ್ಮಾ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಗಡಿ ಭಾಗದ ಪರಿಸ್ಥಿತಿ ಚಿಂತಾಜನಕವಾಗಿದೆ. ಗಡಿ ಗ್ರಾಮಗಳ ಜನರು ಹಾಗೂ ಯೋಧರು ತಮ್ಮ ಪ್ರಾಣಾರ್ಪಣೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯಸರ್ಕಾರ ಯಾವ ದಾರಿ ತುಳಿಯುತ್ತದೆ ಎಂಬುದನ್ನು ನೋಡಲು ರಾಜ್ಯದ ಜನ ಬಯಸುತ್ತಾರೆ. ಕೆಟ್ಟ ನೀತಿಗಳಿಂದಾಗಿ ಬಿಜೆಪಿ–ಪಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.