ತ್ರಿಶ್ಶೂರ್: ಕೇರಳದ ಗುರುವಾಯೂರ್ ದೇವಸ್ಥಾನದ ಬಳಿ ನೇನ್ಮಿನಿ ಎಂಬಲ್ಲಿ ಭಾನುವಾರ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ನಡೆದಿದೆ. ವಡಕ್ಕೇತ್ತಲ ಆನಂದನ್ (28) ಹತ್ಯೆಗೀಡಾದ ವ್ಯಕ್ತಿ.
ಸಿಪಿಎಂ ಕಾರ್ಯಕರ್ತ ಮೊಹಮ್ಮದ್ ಖಾಸಿಂ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಆನಂದನ್ ಅವರನ್ನು ಸಿಪಿಎಂ ಕಾರ್ಯಕರ್ತರೇ ಹತ್ಯೆ ಮಾಡಿರುವುದಾಗಿ ಶಂಕಿಸಲಾಗಿದೆ. 5 ತಿಂಗಳ ಹಿಂದೆ ಖಾಸಿಂ ಹತ್ಯೆ ನಡೆದಿತ್ತು.
ಆನಂದನ್ ಅವರು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಬೈಕ್ನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಾಣ ಉಳಿಸಲಾಗಲಿಲ್ಲ. ಇದೊಂದು ರಾಜಕೀಯ ಸೇಡಿನ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆನಂದನ್ ಅವರ ಹತ್ಯೆ ಖಂಡಿಸಿ ಬಿಜೆಪಿ- ಆರ್ಎಸ್ಎಸ್ ಗುರುವಾಯೂರ್ ನಗರದಲ್ಲಿ ಸೋಮವಾರ ಬಂದ್ಗೆ ಕರೆ ನೀಡಿದೆ.
ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.