ನವದೆಹಲಿ (ಪಿಟಿಐ): ಖಾಸಗಿ ರಂಗದಲ್ಲಿ ನಡೆಯುವ ಭ್ರಷ್ಟಾಚಾರದಂತಹ ಘಟನೆಗಳನ್ನು ತಡೆಗಟ್ಟಲು ಕೆಲವು ಕಾರ್ಯತಂತ್ರಗಳು ಅಗತ್ಯ ಎಂದು ಕೇಂದ್ರ ಜಾಗೃತ ಆಯೋಗದ ಅಧ್ಯಕ್ಷ ಕೆ.ವಿ. ಚೌಧರಿ ಸಲಹೆ ನೀಡಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕೆಲವೊಮ್ಮೆ ತಪ್ಪುಗಳಾದಾಗ ಅದನ್ನು ಎಚ್ಚರಿಸಲು ಆಂತರಿಕ ಲೆಕ್ಕ ಪರಿಶೋಧನೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಮಂಗಳವಾರ ಹೇಳಿದರು.
ಈ ವ್ಯವಸ್ಥೆಯಿಂದ ಸಣ್ಣಪುಟ್ಟ ಭ್ರಷ್ಟಾಚಾರಗಳು ಕೆಳ ಹಂತದಲ್ಲೇ ಪತ್ತೆಯಾಗುತ್ತವೆ. ಈಗಿರುವ ಜಾಗೃತ ವ್ಯವಸ್ಥೆಗಳು ಅಪರಾಧ ಆದ ಬಳಿಕ ಎಚ್ಚರಿಕೆ ನೀಡುತ್ತಿವೆ. ಇದರ ಬದಲು ಆಗುವ ಮೊದಲೇ ತಿಳಿಯುವುದು ಒಳ್ಳೆಯದು ಎಂದು ಅವರು ನುಡಿದರು.
ಸರ್ಕಾರದ ಮಟ್ಟದಲ್ಲಿ ಅವ್ಯವಹಾರವೊಂದು ಪತ್ತೆಯಾದಾಗ ರಾಜ್ಯ ಪೊಲೀಸರು ಅಥವಾ ಕೇಂದ್ರ ತನಿಖಾಧಿಕಾರಿಗಳು ಅದರ ತನಿಖೆ ನಡೆಸಿ ಬಳಿಕ ಶಿಕ್ಷೆ ಕೊಡಿಸುತ್ತಾರೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಡೆಗೆ ಈಗಿರುವ ವ್ಯವಸ್ಥೆಯು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂದರು.