ನವದೆಹಲಿ: ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳು ಪೂರ್ಣವಾಗದೆ ಹಾಗೆಯೇ ಉಳಿಯುತ್ತವೆ. ಚುನಾವಣಾ ಪ್ರಣಾಳಿಕೆಗಳು ರದ್ದಿ ಕಾಗದಗಳಾಗುತ್ತಿವೆ. ಇದಕ್ಕೆ ರಾಜಕೀಯ ಪಕ್ಷಗಳನ್ನೇ ಹೊಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಶನಿವಾರ ಹೇಳಿದ್ದಾರೆ.
‘ಚುನಾವಣಾ ವಿಷಯಗಳಿಗೆ ಸಂಬಂಧಿಸಿದ ಆರ್ಥಿಕ ಸುಧಾರಣೆ’ ಎಂಬ ವಿಷಯದಲ್ಲಿ ದೆಹಲಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಭರವಸೆಗಳನ್ನು ಈಡೇರಿಸಲಾಗದಿರುವುದನ್ನು ಸಮರ್ಥಿಸಿಕೊಳ್ಳುವಲ್ಲಿಯೂ ಪಕ್ಷಗಳ ಸದಸ್ಯರಲ್ಲಿ ಒಮ್ಮತ ಇರುವುದಿಲ್ಲ. ಅದೇ ರೀತಿ, ನಿರ್ಲಜ್ಜ ಕಾರಣಗಳನ್ನೂ ರಾಜಕೀಯ ಪಕ್ಷಗಳು ನೀಡುತ್ತಿವೆ’ ಎಂದು ಅವರು ಹೇಳಿದರು. ಈ ವೇಳೆ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹ ಹಾಜರಿದ್ದರು.
2014ರ ಸಾರ್ವತ್ರಿಕ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿದ್ದ ಪ್ರಣಾಳಿಕೆಗಳ ಬಗ್ಗೆ ಉಲ್ಲೇಖಿಸಿದ ಅವರು, ‘ಬಡತನದ ಅಂಚಿನಲ್ಲಿರುವವರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸುವ ಸಾಂವಿಧಾನಿಕ ಗುರಿ ಮತ್ತು ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಯಾವುದೇ ವಿಷಯಗಳು ಈ ಪ್ರಣಾಳಿಕೆಗಳಲ್ಲಿ ಇಲ್ಲ’ ಎಂದರು.
ಚುನಾವಣಾ ಸುಧಾರಣೆಗಳಿಗೆ ಒತ್ತು ನೀಡಬೇಕು ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರೂ ಪ್ರತಿಪಾದಿಸಿದರು. ‘ಅಧಿಕಾರವನ್ನು ಖರೀದಿಸುವುದಕ್ಕೆ ಚುನಾವಣೆಗಳಲ್ಲಿ ಅವಕಾಶ ಇರಬಾರದು. ಚುನಾವಣೆಯಲ್ಲಿ ಸ್ಪರ್ಧಿಸುವುದು ಹೂಡಿಕೆ ಅಲ್ಲ ಎಂಬುದನ್ನು ಅಭ್ಯರ್ಥಿಯು ಅರಿತಿರಬೇಕು’ ಎಂದು ಅವರು ಹೇಳಿದರು.