ಶ್ರೀನಗರ: ಜಡೆಗೆ ಕತ್ತರಿ ಹಾಕುತ್ತಿರುವ ಪ್ರಕರಣಗಳನ್ನು ಖಂಡಿಸಿ ರಾಜಧಾನಿ ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಭಾಗಗಳಲ್ಲಿ ಮಂಗಳವಾರ ಪ್ರತಿಭಟನೆಗಳು ನಡೆದವು. 24 ಗಂಟೆಗಳಲ್ಲಿ ಇಂತಹ ಆರು ಘಟನೆಗಳು ನಡೆದಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಬೇಗ್ಪೋರದಲ್ಲಿ ಜಡೆಗೆ ಕತ್ತರಿ ಹಾಕಿದ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಾಮ್ಬಾಗ್–ನಾಟಿಪೋರ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಕ್ಕದ ಬರ್ಜುಲ್ಲಾ ಪ್ರದೇಶದಲ್ಲೂ ಪ್ರತಿಭಟನೆ ಜೋರಾಗಿತ್ತು. ಬಾಲಕಿಯೊಬ್ಬಳ ಜಡೆ ಕತ್ತರಿಸಿದ ಸಂಬಂಧ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಧರಣಿ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.
ನಾರ್ಪರಿಸ್ತಾನದಲ್ಲಿ ಮಹಿಳೆಯರಿಬ್ಬರ ಜಡೆಗೆ ಅಪರಿಚಿತರು ಕತ್ತರಿ ಹಾಕಿದ್ದಕ್ಕೆ ರೊಚ್ಚಿಗೆದ್ದ ಜನರು ಪ್ರತಿಭಟನೆ ನಡೆಸಿದರು. ದಕ್ಷಿಣ ಕಾಶ್ಮೀರದ ಶೋಪಿಯಾನ್ನಲ್ಲೂ ಪ್ರತಿಭಟನೆ ನಡೆಯಿತು. ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ ನಡೆಸಲಾಯಿತು.
ಲಾಲ್ಚೌಕ್ನ ವಾಣಿಜ್ಯ ಕೇಂದ್ರವಾದ ಮೈಸುಮಾದಲ್ಲೂ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು, ಬಾಟಲ್ಗಳನ್ನು ಎಸೆದರು. ಹೀಗಾಗಿ ಈ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ವಾಹನಗಳ ಓಡಾಟವನ್ನು ಪೊಲೀಸರು ನಿರ್ಬಂಧಿಸಿದ್ದರು.