ಚೆನ್ನೈ (ಪಿಟಿಐ): ಎಐಎಡಿಎಂಕೆ ಮುಖ್ಯಸ್ಥೆ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ 18 ವರ್ಷಗಳ ಹಿಂದಿನ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತೀರ್ಪು ಶನಿವಾರ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕಟವಾಗಲಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಭಾರಿ ಕುತೂಹಲವನ್ನು ಉಂಟು ಮಾಡಿದೆ.
ರಾಜಕೀಯ ಪಕ್ಷಗಳ ಮುಖಂಡರಲ್ಲಿ ಅದರಲ್ಲೂ ಎಐಎಡಿಎಂಕೆ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದು, ‘ ಅಮ್ಮಾ’ ಮತ್ತೊಮ್ಮೆ ರಾಜಕೀಯ ಬಿರುಗಾಳಿಯಿಂದ ಪಾರಾಗಲಿರುವರೆ ಎಂಬುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
‘ರಾಜಕೀಯ ದ್ವೇಷಕ್ಕಾಗಿ 1996ರಲ್ಲಿ ಡಿಎಂಕೆ ಸರ್ಕಾರ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು, ಇತರ ಪ್ರಕರಣಗಳಲ್ಲಿ ನಿರ್ದೋಷಿ ಎಂದು ರ್ಮಾನವಾದಂತೆ ಈ ಪ್ರಕರಣದಲ್ಲೂ ಅವರು ಕಳಂಕರಹಿತರಾಗಲಿದ್ದಾರೆ’ ಎಂಬುದು ಎಐಎಡಿಎಂಕೆ ಕಾರ್ಯಕರ್ತರ ಹಾರೈಕೆಯಾಗಿದೆ.
2011ರ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿರುವ ಡಿಎಂಕೆ ಪಕ್ಷದ ಮುಖಂಡರು ನ್ಯಾಯಾಲಯದ ತೀರ್ಪು ಜಯಲಲಿತಾ ವಿರುದ್ಧ ಬಂದರೆ ಆಗುವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಇದ್ದಾರೆ.
ತೀರ್ಪು ಜಯಲಲಿತಾ ವಿರುದ್ಧವಾದರೆ ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಲಿರುವುದರಿಂದ ಇತರ ರಾಜಕೀಯ ಪಕ್ಷಗಳೂ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
18 ವರ್ಷಗಳಷ್ಟು ಸುದೀರ್ಘ ಕಾನೂನು ಹೋರಾಟದಲ್ಲಿ ಜಯಲಲಿತಾ ಅವರ ಭವಿಷ್ಯ ಏನಾಗಬಹುದು ಎಂಬ ಆತಂಕದಲ್ಲಿ ರಾಜ್ಯದ ಜನತೆ ಇದ್ದಾರೆ.