ನನ್ನ ಮಗನನ್ನು ಅವರೇ ಕೊಂದಿದ್ದು; ಕಣ್ಣೀರಿಟ್ಟ ಅಮ್ಮ
ನನ್ನ ಮಗನನ್ನು ಅವರೇ ಕೊಂದಿದ್ದು ಸರ್, ಅವರೇ ಹೊಡೆದು ಸಾಯಿಸಿದ್ದು ಎಂದು ಮಧುವಿನ ಅಮ್ಮ ಮಲ್ಲಿ ಒಟ್ಟಪ್ಪಾಲಂ ಉಪ ಜಿಲ್ಲಾಧಿಕಾರಿ ಜೆರಾಮಿಕ್ ಜಾರ್ಜ್ ಮುಂದೆ ಅಳುತ್ತಾ ಬೊಬ್ಬೆ ಹಾಕುತ್ತಿದ್ದರೆ ಅಲ್ಲಿ ನೆರೆದಿದ್ದ ಜನರು ಮೌನಕ್ಕೆ ಶರಣಾಗಿದ್ದರು. ಮಗನ ಕೊಲೆಗಾರರನ್ನು ಬಂಧಿಸುವವರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಬಾರದು ಎಂದು ಮಧುವಿನ ಕುಟುಂಬದವರು ಶುಕ್ರವಾರ ಪಟ್ಟು ಹಿಡಿದಿದ್ದರು.
ಅವನು ಕಾಡಿನಲ್ಲಿಯೇ ವಾಸವಾಗಿದ್ದ, ಯಾರೊಬ್ಬರಿಗೂ ಆತ ತೊಂದರೆ ಕೊಟ್ಟಿಲ್ಲ. ಯಾರಾದರೂ ಏನಾದರೂ ಕೊಟ್ಟರೆ ಮಾತ್ರ ತಿನ್ನುತ್ತಿದ್ದ. ಕಳ್ಳನೆಂದು ಹೇಳಿ ಆತನ ಕೈ ಕಟ್ಟಿ ಹಾಕಿದರು. ಆಮೇಲೆ ಥಳಿಸಿದರು, ಅಕ್ಕಿ ಮೂಟೆ ಹೊತ್ತು ನಡೆಸಿದರು. ಅವನ ಎದೆಗೂ, ಹೊಟ್ಟೆಗೂ ತುಳಿದರು.ಅವನು ಪಾಪದ ಹುಡುಗ ಸರ್, ಹೀಗೆಲ್ಲಾ ಮಾಡಬೇಕಿತ್ತಾ? ಆರೋಗ್ಯ ಸ್ಥಿತಿ ಸರಿ ಇಲ್ಲದ ಅವನ ಮೇಲೆ ಈ ರೀತಿ ಮಾಡಿದಿರಿ, ನಾಳೆ ನನ್ನ ಮೇಲೂ ಇದೇ ರೀತಿ ಮಾಡುತ್ತೀರಿ. ಇದೆಲ್ಲಾ ಸಹಿಸಿಕೊಳ್ಳವುದಕ್ಕೆ ಸಾಧ್ಯವಿಲ್ಲ ಸರ್ ಎಂದು ಅಮ್ಮ ಮಲ್ಲಿ ಕಣ್ಣೀರು ಹಾಕಿದ್ದಾರೆ.