ನವದೆಹಲಿ (ಪಿಟಿಐ/ಐಎಎನ್ಎಸ್): ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರದ ಕಾವು ರಂಗೇರುತ್ತಿದ್ದಂತೆಯೇ ಚುನಾವಣಾ ಆಯೋಗವು ವಿವಿಧ ರಾಜಕೀಯ ಪಕ್ಷಗಳು ನಡೆಸುವ ಸುದ್ದಿಗೋಷ್ಠಿಗಳ ಮೇಲೂ ನಿಗಾ ಇಡಲು ಹೊರಟಿದೆ.
ಮಾದರಿ ನೀತಿ-ಸಂಹಿತೆ ಉಲ್ಲಂಘನೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ ರಾಜಕೀಯ ಪಕ್ಷಗಳ ಸುದ್ದಿಗೋಷ್ಠಿ ಸ್ಥಳಕ್ಕೆ ಆಯೋಗದ ಪ್ರತಿನಿಧಿಗಳು ಹೋಗುತ್ತಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರದ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟವಾಯಿತು. ಮಾಧ್ಯಮ ಪ್ರತಿನಿಧಿಗಳನ್ನು ಸ್ವಾಗತಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್, ‘ಇಂದಿನಿಂದ ಚುನಾವಣಾ ಆಯೋಗದ ಪ್ರತಿನಿಧಿಗಳು ಸುದ್ದಿಗೋಷ್ಠಿಗೆ ಬರಲಿದ್ದಾರೆ ಎಂದು ಪಕ್ಷಕ್ಕೆ ಮಾಹಿತಿ ಬಂದಿದೆ’ ಎಂದರು.
ಆಯೋಗ ಈಗಾಗಲೇ ರಾಜಕೀಯ ಸಭೆ, ಬೀದಿ ಬದಿ ಪ್ರಚಾರ (ರೋಡ್ ಶೋ) ಹಾಗೂ ರ್ಯಾಲಿಗಳ ಮೇಲೆ ಕಣ್ಣಿಟ್ಟಿದೆ ಎಂದೂ ಮೂಲಗಳು ತಿಳಿಸಿವೆ.
ಮತದಾರರಿಗೆ ಸೂಚನೆ
ಅಭ್ಯರ್ಥಿಗಳ ವ್ಯಕ್ತಿತ್ವ ತಿಳಿದುಕೊಳ್ಳುವುದಕ್ಕೆ, ಅವರು ಸಲ್ಲಿಸಿರುವ ಪ್ರಮಾಣಪತ್ರ ಪರಿಶೀಲಿಸುವಂತೆ ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗವು ಅಭಿಯಾನ ಹಮ್ಮಿಕೊಂಡಿದೆ.
ಎರಡು ಗುರುತಿನ ಚೀಟಿ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ಬಳಿ ಎರಡು ಪ್ರತ್ಯೇಕ ವಿಳಾಸದ ಮತದಾರರ ಗುರುತಿನ ಚೀಟಿಗಳು ಇವೆ ಎನ್ನುವ ದೂರಿನ ಬಗ್ಗೆ ಆಯೋಗ ಪರಿಶೀಲನೆ ನಡೆಸುತ್ತಿದೆ.
ಬಿಜೆಪಿಗೆ ಬಹುಮತ?
ದೆಹಲಿ ಚುನಾವಣೆಯಲ್ಲಿ ಬಿಜೆಪಿ ೩೭ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಇಂಡಿಯಾ ಟಿವಿ ಮತ್ತು ಸಿ–ವೋಟರ್ ಜಂಟಿ ಸಮೀಕ್ಷೆ ಹೇಳಿದೆ. ಎಎಪಿ ಕಳೆದ ಬಾರಿ ಗೆದ್ದಿರುವ ೨೮ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ.