ನವದೆಹಲಿ (ಪಿಟಿಐ): ಭಾರತ ಹಾಗೂ ಅಮೆರಿಕದ ನಡುವೆ ‘ಶೀತಲ ಸಮರ’ಕ್ಕೆ ಕಾರಣವಾಗಿರುವ ದೇವಯಾನಿ ಖೋಬ್ರಾಗಡೆಅವರನ್ನು ಬಂಧಿಸಿದ ‘ಪರಿಸ್ಥಿತಿ’ಯ ಬಗ್ಗೆ ಭಾರತದಲ್ಲಿರುವ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್ ಮಂಗಳವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಅದಕ್ಕಾಗಿ ಪೊವೆಲ್ ಅವರು ಹೊಸ ವರ್ಷದ ಸಂದೇಶ ರವಾನಿಸುವ ಅವಕಾಶವನ್ನು ಬಳಸಿಕೊಂಡಿದ್ದಾರೆ.
‘ಕಾನ್ಸುಲರ ಅಧಿಕಾರಿಯನ್ನು ಬಂಧಿಸಿದ ರೀತಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ವ್ಯಕ್ತಪಡಿಸಿದ ವಿಷಾದಕ್ಕೆ ನಾನು ದನಿಗೂಡಿಸುವೆ. ಅದಾಗ್ಯೂ ನಮ್ಮ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ ಮುಂದುವರಿಯಲಿದೆ ಎಂದು ನಾವು ನಿರೀಕ್ಷಿಸಬಹುದು ಎಂದುಕೊಂಡಿದ್ದೇವೆ’ ಎಂದಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಭಾರತ ಹಾಗೂ ಅಮೆರಿಕದ ನಡುವಣ ಹಲವು ‘ಪರಿಣಾಮಕಾರಿ ಅಭಿವೃದ್ಧಿಗಳ’ ಬಗ್ಗೆ ಪ್ರಸ್ತಾಪಿಸುತ್ತ ಪೊವೆಲ್, ‘ದೇವಯಾನಿ ಬಂಧನ ವಿವಾದ ಸಂಬಂಧ ಉದ್ಭವಿಸಿರುವ ಭಿನ್ನಾಭಿಪ್ರಾಯಗಳಿಂದ ಅಭಿವೃದ್ಧಿಗೆ ತೊಡಕಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದೇವಯಾನಿ ಅವರೊಂದಿಗೆ ಕಟುವಾಗಿ ವರ್ತಿಸಿದ ಅಮೆರಿಕದ ಕ್ರಮಕ್ಕೆ ಪ್ರತಿಕಾರವಾಗಿ ಭಾರತ, ಪೊವೆಲ್ ಸೇರಿದಂತೆ ಇಲ್ಲಿರುವ ಅಮೆರಿಕ ರಾಯಭಾರಿಗಳಿಗೆ ನೀಡಲಾಗಿದ್ದ ವಿಶೇಷ ಸವಲತ್ತುಗಳನ್ನು ಹಿಂಪಡೆದಿದೆ.