ನವದೆಹಲಿ: ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಸರ ಸಚಿವಾಲಯದ ಪರವಾನಗಿ ವಿಳಂಬದ ಕಾರಣ ನೀಡಿ ಸುಮಾರು 2,500ಕಿ.ಮೀ ಹೆದ್ದಾರಿ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಎಚ್ಐ) ಹಿಂದೆ ಸರಿದಿದೆ.
ದೇಶದ ವಿವಿಧೆಡೆ ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕಾಗಿ ರೂಪಿಸಲಾಗಿದ್ದ ಒಟ್ಟು 23 ಯೋಜನೆಗಳನ್ನು ಎನ್ಎಎಚ್ಐ ರದ್ದುಪಡಿಸಿರುವುದರಿಂದ ಕರ್ನಾಟಕದ ಬಳ್ಳಾರಿ–ಹೊಸಪೇಟೆ ನಡುವಿನ ರಸ್ತೆ ಸೇರಿದಂತೆ ಅನೇಕ ರಸ್ತೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬೀಳಲಿದೆ.
ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರ ಯುಪಿಎ ಮಹತ್ವಾಕಾಂಕ್ಷೆಯ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗೆ ತೀವ್ರ ಹಿನ್ನಡೆಯಾದಂತಾಗಿದೆ.
ಗುತ್ತಿಗೆದಾರರು ಭದ್ರತಾ ಠೇವಣಿ ನೀಡದಿರುವುದು ಹೆದ್ದಾರಿ ಪ್ರಾಧಿಕಾರದ ಅಸಮಾಧಾನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಹೆದ್ದಾರಿ ಮತ್ತು ರಸ್ತೆ ನಿರ್ಮಾಣಕ್ಕಾಗಿ 2011–12ರಲ್ಲಿ ಒಟ್ಟು 23 ಯೋಜನೆಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿತ್ತು.
ಅಂತರ್ ಸಚಿವಾಲ ಸಮಿತಿ ಅನುಮತಿ ಪಡೆದ ನಂತರ 23 ಯೋಜನೆಗಳಿಗೆ ಹೊಸದಾಗಿ ಟೆಂಡರ್ ಕರೆಯಲಾಗುವುದು. ಸಮಿತಿ ಈ ಯೋಜನೆಗಳಿಗೆ ಪುನಃ ಹೊಸ ದರಗಳನ್ನು ನಿಗದಿ ಪಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರತಿದಿನ 22 ಕಿ.ಮೀ ಹೆದ್ದಾರಿ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಯುಪಿಎ ಸರ್ಕಾರಕ್ಕೆ ವಾಸ್ತವದಲ್ಲಿ ಕೇವಲ 1.5 ಕಿ.ಮೀ ರಸ್ತೆ ನಿರ್ಮಾಣ ಮಾಡಲು ಮಾತ್ರ ಸಾಧ್ಯವಾಗಿದೆ. ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವೈಫಲ್ಯಕ್ಕಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದೆ’ ಎಂದು ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹ ಆರೋಪಿಸಿದ್ದರು.