ನವದೆಹಲಿ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ `ಬೆಂಗಳೂರು ನಗರದ ನಿರ್ಮಾತೃ' ಕೆಂಪೇಗೌಡರ ಹೆಸರು ನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಕೊನೆಗೂ ಬುಧವಾರ ಒಪ್ಪಿಗೆ ನೀಡಿತು.
ಪ್ರಧಾನಿ ಮನಮೋಹನ್ಸಿಂಗ್ ಅಧ್ಯಕ್ಷತೆಯಲ್ಲಿ ಸೇರಿದ್ದ ಸಂಪುಟದ ಸಭೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಒಪ್ಪಿಗೆ ನೀಡಿತು ಎಂದು ರೈಲ್ವೆ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ `ಪ್ರಜಾವಾಣಿ'ಗೆ ತಿಳಿಸಿದರು.
ಈ ನಿಲ್ದಾಣ 2008ರ ಮೇ 23 ರಂದು ಕಾರ್ಯಾರಂಭ ಮಾಡಿದ ಬಳಿಕ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಒತ್ತಾಯ ಬಂದಿತ್ತು. ರಾಜ್ಯ ಸರ್ಕಾರ 2009ರ ಫೆ. 27ರಂದು ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಅನಂತರ ಅನೇಕ ಸಲ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆಯಲಾಗಿತ್ತು.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗಗಳು ದೆಹಲಿಗೆ ಬಂದಾಗಲೆಲ್ಲ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು ಮಾಮೂಲಿಯಾಗಿತ್ತು.
ವಿಮಾನಯಾನ ಸಚಿವ ಅಜಿತ್ಸಿಂಗ್ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲು ಸಮ್ಮತಿಸಿದ ಬಳಿಕ ಸಂಪುಟ ಸಭೆಗೆ ಟಿಪ್ಪಣಿ ಕಳುಹಿಸಲಾಗಿತ್ತು. ಆದರೆ, ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಬಾರದೆಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಬೆಂಗಳೂರು ಬಸ್ ನಿಲ್ದಾಣಕ್ಕೆ ನಾಡಪ್ರಭು ಹೆಸರು ಇಟ್ಟ ಮೇಲೆ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಔಚಿತ್ಯವೇನಿದೆ ಎಂದು ಪ್ರಶ್ನಿಸಿದ್ದವು.