ಇಡುಕ್ಕಿ(ಪಿಟಿಐ): ಬಿರು ಗಾಳಿಗೆ ಮರ ಉರುಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಸಾವಿಗೀಡಾಗಿದ್ದು, ಒಬ್ಬ ಗಂಭೀರ ಗಾಯಗೊಂಡಿರುವ ಘಟನೆ ಕೇರಳದ ಅಡಿಮಲಿ ಸಮೀಪದ ಕುಂಜಿತನಿಯಲ್ಲಿ ಶುಕ್ರವಾರ ಸಂಭವಿಸಿದೆ.
‘ಮರ ಮೇಲೆ ಬಿದ್ದ ಪರಿಣಾಮ ಪಂಚಿಯಮ್ಮ, ಪುಷ್ಪಾ ಹಾಗೂ ಮೆರ್ಸಿ ಎಂಬ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ’ ಎಂದು ಕಾರ್ಡೋಮಮ್ ಎಸ್ಟೇಟ್ ನ ಪೊಲೀಸ್ ನಿಲಿಕಾಡ್ ಜಾನ್ಸನ್ ತಿಳಿಸಿದ್ದಾರೆ.
‘ರಾತ್ರಿ 2ರಿಂದಲೇ ಪೂರ್ವ ದಿಕ್ಕಿನಿಂದ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು, ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೇರಳದ ಕರಾವಳಿ ಹಾಗೂ ಲಕ್ಷದ್ವೀಪವನ್ನು ಬಿರುಗಾಳಿ ತಲುಪುವ ಸಾಧ್ಯತೆಯಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.