ನವದೆಹಲಿ (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಯಲ್ಲಿ ಭೌಗೋಳಿಕ- ರಾಜಕೀಯ ನೈಜ ಪರಿಸ್ಥಿತಿಗೆ ತಕ್ಕಂತೆ ಸುಧಾರಣೆ ತರಬೇಕು ಎಂಬ ಬೇಡಿಕೆಗೆ ಸಹಮತ ವ್ಯಕ್ತಪಡಿಸಿರುವ ಜರ್ಮನಿ, ಈ ಜಾಗತಿಕ ಸಂಸ್ಥೆಯ ಕಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಮಂಗಳವಾರ ಬೆಂಬಲ ವ್ಯಕ್ತಪಡಿಸಿದೆ.
ಜರ್ಮನಿಯ ಭಾರತೀಯ ರಾಯಭಾರಿ ಥಾಮಸ್ ಮಟುಸ್ಸೆಕ್, ಈಗ ದ್ರತಾ ಮಂಡಳಿಯ ಕಾಯಂ ಅಲ್ಲದ (ಹಂಗಾಮಿ) ಸದಸ್ಯತ್ವ ಹೊಂದಿದ ಭಾರತ ಮತ್ತು ಜರ್ಮನಿ ಕಾಯಂ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಪರಸ್ಪರ ಬೆಂಬಲಿಸಲು ಬದ್ಧವಾಗಿರುವುದನ್ನು ಪುನರುಚ್ಚರಿಸಿದರು.
ಅವರು ಇಲ್ಲಿನ ಜರ್ಮನಿ ರಾಯಭಾರ ಕಚೇರಿಯಲ್ಲಿ ಎರಡೂ ದೇಶಗಳ ನಡುವಿನ 60 ವರ್ಷಗಳ ಬಾಂಧವ್ಯವನ್ನು ಆಚರಿಸುವ ವರ್ಷಾವಧಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ, ಬ್ರೆಜಿಲ್, ಜಪಾನ್ ಜೊತೆಗೆ ಜಿ-4 ಒಕ್ಕೂಟದ ಭಾಗವಾಗಿರುವ ಜರ್ಮನಿಯು ಭದ್ರತಾ ಮಂಡಳಿಯ ಸುಧಾರಣೆ 21ನೇ ಶತಮಾನದ ಸನ್ನಿವೇಶಕ್ಕೆ ತಕ್ಕಂತೆ ಆಗಬೇಕು ಮತ್ತು ಎರಡನೇ ಜಾಗತಿಕ ಯುದ್ಧದಲ್ಲಿ ರಚನೆಯಾದ ವಿಶ್ವಸಂಸ್ಥೆಯ ಈ ಅಂಗ ಬದಲಾಗಬೇಕೆಂದು ಬಯಸಿದೆ ಎಂದು ಅವರು ಹೇಳಿದರು.