ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಮುಂದಿಟ್ಟ ಆಹ್ವಾನವನ್ನು ಯಾವ ರಾಜಕೀಯ ಪಕ್ಷಗಳೂ ಒಪ್ಪಿಕೊಳ್ಳದ ಕಾರಣ ಹೊಸದಾಗಿ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಎಂಟು ತಿಂಗಳ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆ ಬೀಳುವ ಕಾಲ ಸನ್ನಿಹಿತವಾದಂತಿದೆ.
ದೆಹಲಿಯಲ್ಲಿ ಸರ್ಕಾರ ರಚನೆ ವಿಷಯವಾಗಿ ಜಂಗ್ ಅವರು ಬಿಜೆಪಿ, ಆಮ್ ಆದ್ಮಿ ಪಕ್ಷ (ಎಪಿಪಿ) ಹಾಗೂ ಕಾಂಗ್ರೆಸ್ ಮುಖಂಡರ ಜತೆ ಸೋಮವಾರ ಚರ್ಚೆ ನಡೆಸಿದರು. ಸರ್ಕಾರ ರಚಿಸುವುದಕ್ಕೆ ಬಿಜೆಪಿ ನಿರಾಕರಿಸಿದರೆ, ಎಎಪಿ ಹಾಗೂ ಕಾಂಗ್ರೆಸ್ ತಕ್ಷಣವೇ ಚುನಾವಣೆ ನಡೆಸುವುದಕ್ಕೆ ಸಮ್ಮತಿ ಸೂಚಿಸಿದವು.
ವಿಧಾನಸಭೆ ವಿಸರ್ಜಿಸುವಂತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಜಂಗ್ ಯಾವುದೇ ಸಮಯದಲ್ಲಿ ಶಿಫಾರಸು ಕಳಿಸುವ ಸಾಧ್ಯತೆ ಇದೆ. ದೆಹಲಿ ವಿಧಾನಸಭೆಯನ್ನು ಶೀಘ್ರವೇ ವಿಸರ್ಜಿಸಬೇಕೆಂದು ಕೋರಿ ಎಎಪಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ದೆಹಲಿಯಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವುದಕ್ಕೆ ಕೇಂದ್ರ ಹಾಗೂ ಲೆಫ್ಟಿಲೆಂಟ್ ಗವರ್ನರ್ ಅವ
ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಸರ್ಕಾರ ರಚನೆ ಸಾಧ್ಯತೆಯನ್ನು ನವೆಂಬರ್ ೧೧ರೊಳಗೆ ಅಂತಿಮಗೊಳಿಸಲು ಗಡುವು ನೀಡಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಜಂಗ್, ಈ ಸಂಬಂಧ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದರು.
ಸಮಾಲೋಚನೆ: ಬಿಜೆಪಿಯ ಸತೀಶ್ ಉಪಾಧ್ಯಾಯ, ಜಗದೀಶ್ ಮುಖಿ, ಕಾಂಗ್ರೆಸ್ನ ಹಾರೂನ್ ಯುಸೂಫ್, ಎಎಪಿಯ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಇತರರು ಸೋಮವಾರ ಜಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮೂರೂ ಪಕ್ಷಗಳು ಹೇಳಿವೆ. ಹೀಗಾಗಿ ಜಂಗ್ ಶೀಘ್ರವೇ ರಾಷ್ಟ್ರಪತಿಗೆ ವರದಿ ಕಳಿಸಲಿದ್ದಾರೆ ಎಂದು ಲೆ. ಗವರ್ನರ್ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸರ್ಕಾರ ರಚಿಸುವಂತೆ ನಜೀಬ್ ಜಂಗ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಲು ಭಾನುವಾರ ನಡೆದ ಬಿಜೆಪಿ ಪ್ರಮುಖ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಲು ಅನುಮತಿ ನೀಡುವಂತೆ ಕೋರಿ ಜಂಗ್ ಅವರು ರಾಷ್ಟ್ರಪತಿಗೆ ಅಕ್ಟೋಬರ್ನಲ್ಲಿ ವರದಿ ಕಳಿಸಿದ್ದರು. ಇದಕ್ಕೆ ರಾಷ್ಟ್ರಪತಿ ಅನುಮತಿ ನೀಡಿದ್ದಾಗಿ ಕೇಂದ್ರವು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿತ್ತು.
ಗೆಲ್ಲುವ ಆತ್ಮವಿಶ್ವಾಸ: ಎಲ್ಲೆಡೆ ಮೋದಿ ಅಲೆ ಇದೆ. ಅಲ್ಲದೇ, ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ನಡೆದ ವಿಧಾನಸಭೆ
ಬಿಜೆಪಿ ನಿರ್ಧಾರಕ್ಕೆ ಕಾರಣವೇನು? |
---|
ಪ್ರಜಾವಾಣಿ ವಾರ್ತೆ ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚಿಸಬೇಕಾದರೆ ಬಿಜೆಪಿಗೆ ‘ಶಾಸಕರ ಖರೀದಿ’ ಅನಿವಾರ್ಯವಾಗುತ್ತಿತ್ತು. ಆದರೆ ‘ವಾಮ ಮಾರ್ಗ’ ಹಿಡಿಯಲು ಮೋದಿ ಅವರಿಗೆ ಇಷ್ಟವಿರಲಿಲ್ಲ. ಆದ ಕಾರಣ ಹೊಸದಾಗಿ ಚುನಾವಣೆ ಎದುರಿಸುವ ನಿರ್ಧಾರವನ್ನು ಪಕ್ಷ ತಳೆಯಬೇಕಾಯಿತು. ‘ಚುನಾವಣೆ ಎದುರಿಸುವುದು ಬೇಡ. ಸರ್ಕಾರ ರಚಿಸೋಣ’ ಎಂದು ಪಕ್ಷದಲ್ಲಿ ಕೆಲವು ಶಾಸಕರು ಸಲಹೆ ನೀಡಿದ್ದರು. ಹೀಗಾಗಿ ಬಿಜೆಪಿ ಸಾಕಷ್ಟು ಗೊಂದಲದಲ್ಲಿ ಇತ್ತು. ಪಕ್ಷವು ಕನಿಷ್ಠ 6 ತಿಂಗಳು ಸರ್ಕಾರ ನಡೆಸಬಹುದು ಎನ್ನುವುದು ಅಧ್ಯಕ್ಷ ಅಮಿತ್ ಷಾ ನಿಲುವಾಗಿತ್ತು. ೪೯ ದಿನಗಳು ಮಾತ್ರ ಆಡಳಿತ ನಡೆಸಿದ ಎಎಪಿಗಿಂತ ತಾವೇ ಮೇಲು ಎನ್ನುವುದನ್ನು ತೋರಿಸಿಕೊಡಬೇಕು, ಲೋಕಾಯುಕ್ತ ರಚನೆ ಸೇರಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಷಾ ಲೆಕ್ಕಾಚಾರವಾಗಿತ್ತು. |
ಚುನಾವಣೆಯಲ್ಲಿ ಪಕ್ಷವು ಗೆಲುವು ಸಾಧಿಸಿರುವುದು ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ. ಮತ್ತೆ ಚುನಾವಣೆ ನಡೆದಲ್ಲಿ ಗೆಲುವು ಖಚಿತ ಎನ್ನುವ ಆತ್ಮವಿಶ್ವಾಸದಲ್ಲಿದೆ ಬಿಜೆಪಿ.
ಮೋದಿ ಕೂಡ ಚುನಾವಣೆಗೆ ಒಪ್ಪಿಕೊಂಡಿದ್ದಾರೆ. ‘ಅಡ್ಡ ದಾರಿ’ ಮೂಲಕ ಪಕ್ಷವು ದೆಹಲಿಯಲ್ಲಿ ಸರ್ಕಾರ ರಚಿಸಕೂಡದು ಎಂದು ಆರ್ಎಸ್ಎಸ್ ತನ್ನ ನಿಲುವನ್ನು ಪಕ್ಷಕ್ಕೆ ತಿಳಿಸಿದೆ.
‘ಎಎಪಿ ಸರ್ಕಾರದ ಕಾರ್ಯವೈಖರಿಯನ್ನು ಜನ ನೋಡಿದ್ದಾರೆ. ಮತ್ತೆ ಆ ಪಕ್ಷಕ್ಕೆ ಬೆಂಬಲ ಸಿಗುವುದಿಲ್ಲ. ನಾವು ೪೭ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ’ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಿಧುರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.