ನವದೆಹಲಿ: ನೈರುತ್ಯ ಮಾರುತಗಳ (ಮುಂಗಾರು) ಮಂದಗತಿಯ ಚಲನೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಇನ್ನೂ ಹಲವು ದಿನ ಭಾರಿ ಮಳೆ ಸುರಿಯಲಿದೆ.
ಮುಂದಿನ ಮೂರು ದಿನ ದೇಶದ ಮಧ್ಯ ಭಾಗದಲ್ಲಿ ಧಾರಾಕಾರ ಮಳೆ ಸುರಿಸಲಿರುವ ನೈರುತ್ಯ ಮಾರುತಗಳು ನಂತರ ಆಂಧ್ರ ಪ್ರದೇಶ ಮತ್ತು ಸುತ್ತಮುತ್ತಲಿನ ರಾಜ್ಯಗಳನ್ನು ಪ್ರವೇಶಿಸಲಿವೆ.
ಸೆ.27ರಿಂದ ಆರಂಭವಾಗಲಿರುವ ದುರ್ಗಾ ಪೂಜೆಗೂ ಮೊದಲು ಪಶ್ಚಿಮ ಬಂಗಾಳದಲ್ಲಿ ತುಂತುರು ಮಳೆಯಾಗಲಿದೆ. ಅದಾದ ನಂತರ ಮೋಡಗಳು ನಿಧಾನವಾಗಿ ಸರಿಯಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2017ರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ 3–4ರಷ್ಟು ಕಡಿಮೆ ಮಳೆ ಬೀಳಲಿದೆ. ಈ ಬಾರಿ ನೈರುತ್ಯ ಮಾರುತಗಳು 20 ದಿನ ನಿಧಾನವಾಗಿ ಚಲಿಸಲಿವೆ ಎಂದು ಭೂವಿಜ್ಞಾನ ಸಚಿವಾಲಯ ತಿಳಿಸಿದೆ.
ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗ, ಪೂರ್ವ ರಾಜಸ್ಥಾನ, ಚಂಡೀಗಡ, ಹರಿಯಾಣ, ದೆಹಲಿ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.