ಮುಂಬೈ(ಪಿಟಿಐ): ಮುಂಬೈ ಭಯೋತ್ಪಾದನಾ ದಾಳಿ (26/11) ಸಂಬಂಧ ಭಾರತದ ಸಾಕ್ಷಿಗಳ ಪಾಟೀ ಸವಾಲು ದಾಖಲಿಸಿಕೊಳ್ಳುವ ಸಲುವಾಗಿ ಎಂಟು ಸದಸ್ಯರ ಪಾಕಿಸ್ತಾನದ ನ್ಯಾಯಾಂಗ ಆಯೋಗ ಮಂಗಳವಾರ ಇಲ್ಲಿಗೆ ಆಗಮಿಸಿತು.
ಭಾರಿ ಭದ್ರತೆ ನಡುವೆ ಬೆಳಿಗ್ಗೆ ಇಲ್ಲಿನ ನ್ಯಾಯಾಲಯಕ್ಕೆ ಆಗಮಿಸಿದ ಆಯೋಗದ ಸದಸ್ಯರು, ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಏಳು ಜನರಿಗೆ ಶಿಕ್ಷೆ ನೀಡುವ ಸಂಬಂಧ ಭಾರತದ ಸಾಕ್ಷಿಗಳ ಪಾಟೀ ಸವಾಲು ನಡೆಸಿದರು.
ಪಾಕ್ ನ್ಯಾಯಾಂಗ ಆಯೋಗ ಭಾರ ತದ ಪರ ವಾದಿಸಿದ ವಿಶೇಷ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ಅವರಿಂದ ವಿಚಾರಣೆ ಆರಂಭಿಸಿತು. ಪಾಕಿಸ್ತಾನ ದಲ್ಲಿ ವಿಚಾರಣೆ ಬಾಕಿ ಇರುವ ದಾಳಿ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಇರುವ ಭಾರತದ ಸಾಕ್ಷ್ಯಗಳ ಮಹತ್ವದ ಬಗ್ಗೆ ತಿಳಿಸಿದರು.
ವಿಚಾರಣೆಯನ್ನು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಪಿ.ವೈ.ಲಡೇಕರ್ ದಾಖಲಿಸಿಕೊಂಡರು.
ಭಾರತದ ಸಾಕ್ಷಿಗಳಾಗಿ ನಗರ ಆರ್.ವಿ.ಸಾವಂತ್ ವಾಘ್ಳೆ, ರಮೇಶ್ ಮಂಡಲ್ ಹಾಗೂ ದಾಳಿಯಲ್ಲಿ ಹತರಾದ ಪಾಕಿಸ್ತಾನಿ ಉಗ್ರರ ಶವಪರೀಕ್ಷೆ ನಡೆಸಿದ ವೈದ್ಯರು ಹಾಜರಿದ್ದರು.
ಪಾಕ್ ನ್ಯಾಯಾಂಗ ಆಯೋಗ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಮೊದಲ ಬಾರಿ ಕೆಲವು ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು.