ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವಾಗ ಹೂವು, ಖಾದಿ ಕರವಸ್ತ್ರ ಅಥವಾ ಪುಸ್ತಕವನ್ನು ಉಡುಗೊರೆಯಾಗಿ ಕೊಡಿ. ಆದರೆ ಹೂಗುಚ್ಛಗಳನ್ನು ಮಾತ್ರ ಕೊಡಬೇಡಿ ಎಂದು ಗೃಹ ಸಚಿವಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
‘ದೇಶದ ಒಳಗೆ ಪ್ರಧಾನಿ ಪ್ರವಾಸ ಕೈಗೊಂಡಾಗ ಅವರನ್ನು ಸ್ವಾಗತಿಸಲು ಹೂಗುಚ್ಛ ಬೇಡ ಎಂಬುದು ಅಧಿಕಾರಿಗಳ ಆಶಯ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳು ಈ ನಿರ್ದೇಶನವನ್ನು ಪಾಲಿಸಬೇಕು’ ಎಂದು ಸಚಿವಾಲಯ ಹೇಳಿದೆ.
ಅತಿಥಿಗಳನ್ನು ಸ್ವಾಗತಿಸುವಾಗ ಕೆಲವು ದಿನಗಳ ನಂತರ ಕಸದಬುಟ್ಟಿ ಸೇರುವ ಹೂಗುಚ್ಛದ ಬದಲಾಗಿ ಪುಸ್ತಕ ಮತ್ತು ಖಾದಿ ಕರವಸ್ತ್ರ ಕೊಡಬಹುದು ಎಂದು ಮೋದಿಯವರು ಈ ಹಿಂದೆ ‘ಮನ್ ಕಿ ಬಾತ್’ನಲ್ಲಿ ಹೇಳಿದ್ದರು.
‘ಖಾದಿ ಕರವಸ್ತ್ರ ಕೊಡುವುದರಿಂದ ಕರಕುಶಲಕರ್ಮಿಗಳಿಗೆ ಸಹಾಯವಾಗುತ್ತದೆ. ಪುಸ್ತಕಗಳನ್ನು ಉಡುಗೊರೆ ನೀಡುವುದರಿಂದ ಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸಕ್ಕೆ ಪ್ರೇರೇಪಿಸಿದಂತಾಗುತ್ತದೆ ಮತ್ತು ಇವು ಹೆಚ್ಚು ಕಾಲ ನಮ್ಮೊಂದಿಗಿರುತ್ತದೆ’ ಎಂದು ಹೇಳಿದ್ದರು.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಉದ್ಘಾಟನೆ ಸಮಾರಂಭದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುಲಾಬಿ ಹೂ ಕೊಡುವ ಮೂಲಕ ಅತಿಥಿಗಳನ್ನು ಸ್ವಾಗತಿಸಿ ಮಾದರಿ ಹಾಕಿಕೊಟ್ಟಿದ್ದರು.