ಜೈಪುರ: ರಜಪೂತ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ ರಾಜಸ್ತಾನದ ಶಿಕ್ಷಣ ಸಚಿವೆ ಕಿರಣ್ ಮಹೇಶ್ವರಿ ಅವರ ಮೂಗು ಮತ್ತು ಕಿವಿ ಕತ್ತರಿಸುವುದಾಗಿ ಶ್ರೀ ರಜಪೂತ ಕರ್ಣಿ ಸೇನಾ ಬೆದರಿಕೆ ಒಡ್ಡಿದೆ.
ಮುಂದಿನ ಲೋಕಸಭೆ ಚುನಾವಣೆ ಪ್ರಯುಕ್ತ ಸರ್ವ ರಜಪೂತ ಸಮಾಜ ಸಂಘರ್ಷ ಸಮಿತಿಯು ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ಕೈಗೊಂಡಿತ್ತು. ಈ ವೇಳೆ ಪ್ರಚಾರ ಭಾಷಣದಲ್ಲಿ ಸಚಿವೆ ಕಿರಣ್ ಮಹೇಶ್ವರಿ ಅವರು, ರಜಪೂತ ಸಮುದಾಯದ ಜನರು ಮಳೆಗಾಲದ ಇಲಿಗಳಂತೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು.
‘ಅಲ್ಲದೇ ಮಳೆಗಾಲದ ಇಲಿಗಳು ಮಳೆಗಾಲದಲ್ಲಿ ಮಾತ್ರ ಬಿಲದಿಂದ ಹೊರಗೆ ಬರುವ ಹಾಗೇ ರಜಪೂತ ಸಮುದಾಯದವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರುತ್ತಾರೆ’ ಎಂದಿದ್ದರು.
ಮಹೇಶ್ವರಿ ಅವರ ಹೇಳಿಕೆಯಿಂದ ಕೆಂಡಮಂಡಲವಾದ ಕರ್ಣಿ ಸೇನಾ, ‘ಸಚಿವೆ ಕಿರಣ್ ಅವರು ಇಡೀ ರಜಪೂತ ಸಮುದಾಯದ ಬಳಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದೆ’.
‘ರಾಜ್ಯದಲ್ಲಿ ರಜಪೂತ ಸಮುದಾಯದ ಬೆಂಬಲದಿಂದ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. ಮಹೇಶ್ವರಿ ಅವರು ಈ ಇಲಿಗಳ ಬೆಂಬಲದಿಂದಲೇ ಹಿಂದಿನ ಚುನಾವಣೆಯಲ್ಲಿ ಜಯ ಗಳಿಸಿರುವುದು. ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಕಿಡಿಕಾರಿದ್ದಾರೆ.
ಮಹೇಶ್ವರಿ, ಚುನಾವಣಾ ಕ್ಷೇತ್ರವಾದ ರಜಸ್ಮಂಡ್ನಲ್ಲಿ 40 ಸಾವಿರ ರಜಪೂತ ಸಮುದಾಯದ ಮತಗಳಿವೆ. ನೀವು ತಕ್ಷಣವೇ ಕ್ಷಮೆ ಕೇಳಬೇಕು ಹಾಗೂ ರಾಜ್ಯ ಸರ್ಕಾರ ಈ ಕುರಿತು ಪ್ರತಿಕ್ರಿಯಿಸಬೇಕು’ ಎಂದು ಕರ್ಣಿ ಸೇನೆಯ ರಾಜ್ಯಘಟಕದ ಅಧ್ಯಕ್ಷ ಮಹಿಪಾಲ್ ಮಕ್ರಾನ ಆಗ್ರಹಿಸಿದ್ದಾರೆ.