ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಗಿ 27 ವರ್ಷವಾದರೂ, ಅವರ ಹತ್ಯೆಯ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ.
ಸಿಬಿಐ ನೇತೃತ್ವದ ಬಹುಶಿಸ್ತೀಯ ಮೇಲ್ವಿಚಾರಣಾ ಏಜೆನ್ಸಿ (ಎಂಡಿಎಂಎ) ತನಿಖೆ ನಡೆಸುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ‘ತ್ವರಿತವಾಗಿ’ ಪ್ರಕರಣದ ತನಿಖೆ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಳೆದ ಮಾರ್ಚ್ನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚಿಸಿತ್ತು.
ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿದ್ದ ಎಂಡಿಎಂಎ, ‘ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳ ವಿಚಾರಣೆ ಇನ್ನೂ ನಡೆಸಬೇಕಿದೆ. ಸಾಕ್ಷಿಗಳು ವಿವಿಧ ದೇಶಗಳಲ್ಲಿದ್ದು, ಅವರಿಗೆ ಪತ್ರ ಕಳುಹಿಸಲಾಗಿದೆ’ ಎಂದು ತಿಳಿಸಿತ್ತು.
ಕಾಂಗ್ರೆಸ್ ನಾಯಕರಿಂದ ನಮನ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 27ನೇ ಪುಣ್ಮಸ್ಮರಣೆ ಅಂಗವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಜೀವ್ ಅವರ ಸಮಾಧಿ ಸ್ಥಳ ವೀರಭೂಮಿಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.