ನಾಗ್ಪುರ (ಪಿಟಿಐ): ರಾಮಮಂದಿರ ನಿರ್ಮಾಣ ಮಂತ್ರವನ್ನು ಪುನಃ ಜಪಿಸಲು ಆರಂಭಿಸಿರುವ ವಿಶ್ವ ಹಿಂದೂ ಪರಿಷತ್, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಂಸದರ ಬೆಂಬಲ ಪಡೆಯುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡುವುದಾಗಿ ಹೇಳಿದೆ.
ಜುಲೈ 28ರಂದು ಸಂಸದರ ಪ್ರಥಮ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗುವುದು ಎಂದು ವಿಎಚ್ಪಿ ಮುಖಂಡ ಪ್ರವೀಣ್ ತೊಗಾಡಿಯಾ ತಿಳಿಸಿದರು.
ಅಮರಾವತಿಯಲ್ಲಿ ನಡೆದ ಆರ್ಎಸ್ಎಸ್ನ ಚಿಂತನ ಬೈಠಕ್ನಲ್ಲಿ ಭಾಗವಹಿಸಿ ಹಿಂತಿರುಗಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಈಗ ಚೆಂಡು ಸರ್ಕಾರದ ಅಂಗಳದಲ್ಲಿ ಇದೆ, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಸತ್ತು ಕಾನೂನು ರಚಿಸಬೇಕಿದೆ' ಎಂದು ಹೇಳಿದರು.
ಪ್ರಾಚ್ಯವಸ್ತು ಇಲಾಖೆ ನಡೆಸಿದ ಉತ್ಕನನ ಸಂದರ್ಭದಲ್ಲಿ ರಾಮಮಂದಿರ ಇದ್ದುದರ ಬಗ್ಗೆ ಪುರಾವೆಗಳು ದೊರತಿವೆ, ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮೊದಲಿನಿಂದಲೂ ರಾಮಮಂದಿರವಿತ್ತು ಎಂದು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದೆ ಎಂದು ತೊಗಾಡಿಯಾ ಹೇಳಿದರು.
ಗುಜರಾತ್ನ ಮಾಜಿ ಸಚಿವ ಷಾ ಅವರು ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯ ಬಗ್ಗೆ, `ಅದು ನಿರೀಕ್ಷಿತ. ಯಾವುದೇ ಕಟ್ಟಾ ಹಿಂದೂ ಮುಖಂಡ ಅಯೋಧ್ಯೆಗೆ ಭೇಟಿ ನೀಡಿದರೆ ಮಂದಿರ ನಿರ್ಮಾಣವಾಗಲೇಬೇಕು ಎಂಬ ಹೇಳಿಕೆ ನೀಡುವ ಮನಸ್ಸಾಗುತ್ತದೆ' ಎಂದರು.