ಚೆನ್ನೈ (ಪಿಟಿಐ): ಮುಸ್ಲಿಂ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ತಮ್ಮ ಮಹತ್ವಾಕಾಂಕ್ಷೆಯ `ವಿಶ್ವರೂಪಂ' ಚಲನಚಿತ್ರದ ಮೇಲೆ ನಿಷೇಧ ಹೇರಿರುವ ತಮಿಳುನಾಡು ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವೆ ಎಂದು ಗುರುವಾರ ತಿಳಿಸಿದ ನಟ, ನಿರ್ದೇಶಕ ಕಮಲಹಾಸನ್ ಇಂತಹ `ಸಾಂಸ್ಕೃತಿಕ ಭಯೋತ್ಪಾದನೆ'ಯನ್ನು ನಿಲ್ಲಿಸಬೇಕಾಗಿದೆ ಎಂದಿದ್ದಾರೆ.
`ಕೆಲ ಸಣ್ಣ ಗುಂಪುಗಳ ರಾಜಕೀಯ ಹಿತಾಸಕ್ತಿಗಾಗಿ ನಾನು ನಿರ್ಧಯ ಸಾಧನವಾಗಿ ಬಳಕೆಯಾಗುತ್ತಿದ್ದೇನೆ. ನಿಮ್ಮವರಿಗೆ ನೀವು ಬೇಡವಾದರೆ ಪ್ರಸಿದ್ಧರಾದರೂ ಕೂಡ ನಿಮ್ಮನ್ನು ತುಳಿದು ಹಾಕುವುದು ಒಂದು ಉತ್ತಮ ಮಾರ್ಗ. ಇದು ಪದೇ ಪದೇ ಮರುಕಳಿಸುತ್ತಿದೆ. ಯಾವುದೇ ಪಕ್ಷಕ್ಕೆ ಸೇರದ ಹಾಗೂ ದೇಶಪ್ರೇಮಿ ಮುಸ್ಲಿಮರು ನನ್ನ ಚಿತ್ರ ನೋಡಿದರೆ ಖಂಡಿತ ಹೆಮ್ಮೆ ಪಡುತ್ತಾರೆ. ಆ ರೀತಿ ಚಿತ್ರ ನಿರ್ಮಿಸಲಾಗಿದೆ' ಎಂದು ಹೇಳಿದರು.
ಇತ್ತೀಚೆಗಷ್ಟೇ ಚಿತ್ರದ ವಿಶೇಷ ಪ್ರದರ್ಶನಕ್ಕೆ ಆಹ್ವಾನಿಸಲ್ಪಟ್ಟ ಮುಸ್ಲಿಂ ಪ್ರತಿನಿಧಿಗಳಿಂದ ಬೆಂಬಲದ ಮಾತುಗಳು ಕೇಳಿಬಂದಿರುವ ಈ ಹೊತ್ತಿನಲ್ಲಿ ಚಿತ್ರ ತಮ್ಮ ವಿರುದ್ಧವಾಗಿದೆ ಎಂದು ನನ್ನ ಮುಸ್ಲಿಂ ಸಹೋದರರು ಹೇಗೆ ಅರ್ಥೈಸಿಕೊಂಡಿದ್ದಾರೆ ಎನ್ನುವುದೇ ನನಗೆ `ದಿಗಿಲು' ಮೂಡಿಸಿದೆ ಎಂದು ಕಮಲ ಹೇಳಿದರು.
`ಒಂದು ಸಮುದಾಯಕ್ಕೆ ಕಳಂಕ ತಂದಿದ್ದೇನೆ ಎಂಬ ಆರೋಪದ ನೋವು ನೀಡುವ ಜತೆಗೆ ನನ್ನ ಸಂವೇದನೆಗಳಿಗೆ ನೀಜವಾಗಿ ಅಪಮಾನಮಾಡಲಾಗಿದೆ. ಇಂತಹ ಸಾಂಸ್ಕೃತಿಕ ಭಯೋತ್ಪಾದನೆ ತಡೆಯುವ ನಿಟ್ಟಿನಲ್ಲಿ ಈಗ ನಾನು ಕಾನೂನು ಸಂಘರ್ಷ ಮಾಡಬೇಕಾಗಿದೆ' ಎಂದು ತಿಳಿಸಿದರು.