ಜಮ್ಮು (ಪಿಟಿಐ): ‘ಕೋಮುವಾದಿ’ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಯತ್ನಿ ಸುತ್ತಿರುವ ಬಿಜೆಪಿ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಶೇ 40ರಷ್ಟು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರ ಮನಗೆಲ್ಲಲು ಮುಂದಾಗಿದೆ. ತನ್ನ ಮಹತ್ವಾಕಾಂಕ್ಷೆಯ ‘ಮಿಷನ್ 44 ಪ್ಲಸ್’ ಹೆಸರಿನಲ್ಲಿ ಕಣಿವೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪಕ್ಷ ಯತ್ನಿಸುತ್ತಿದೆ.
ವಿಧಾನಸಭೆಯ 87 ಸ್ಥಾನಗಳ ಪೈಕಿ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಇವರಲ್ಲಿ 32 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 25, ಜಮ್ಮುವಿನಲ್ಲಿ ಆರು ಹಾಗೂ ಲಡಾಖ್ನಲ್ಲಿ ಒಂದು ಸ್ಥಾನದಲ್ಲಿ ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.
ಕಣಿವೆ ಪ್ರದೇಶದಲ್ಲಿ ಮೂವರು ಕಾಶ್ಮೀರಿ ಪಂಡಿತರನ್ನು ಹಾಗೂ ಒಬ್ಬ ಸಿಖ್ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿರುವ ಬಿಜೆಪಿ, ಲಡಾಖ್ನಲ್ಲಿ ಮೂವರು ಬೌದ್ಧ ಧರ್ಮೀಯರನ್ನೂ ನಿಲ್ಲಿಸಿದೆ.
‘ಕಾಶ್ಮೀರಕ್ಕೆ ಬಿಜೆಪಿ ಅಸ್ಪೃಶ್ಯವೇನೂ ಅಲ್ಲ. ನಮ್ಮ ರ್್ಯಾಲಿ, ರೋಡ್ಷೋಗಳಿಗೆ ಕಣಿವೆ ಭಾಗದ ಭಾರಿ ಜನರು ಬರುತ್ತಾರೆ. ಬಿಜೆಪಿಯನ್ನು ಅವರು ಎನ್ಸಿ ಹಾಗೂ ಪಿಡಿಪಿ ಪಕ್ಷಗಳಿಗೆ ಪರ್ಯಾಯವಾಗಿ ನೋಡುತ್ತಾರೆ’ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಿಜೆಪಿ ಉಸ್ತುವಾರಿ ಅವಿನಾಶ್ ರೈ ಖನ್ನಾ ತಿಳಿಸಿದ್ದಾರೆ.
2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ 24 ಮುಸ್ಲಿಂ ಅಭ್ಯರ್ಥಿಗಳು ಹಾಗೂ ಏಳು ಕಾಶ್ಮೀರಿ ಪಂಡಿತರು ಸ್ಪರ್ಧಿಸಿದ್ದರು. 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ರಲ್ಲಿ ಜಯ ದೊರೆತಿತ್ತು. 2002 ರ ಚುನಾವಣೆಯಲ್ಲಿ ಬಿಜೆಪಿ 17 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಇದೇ 25 ರಿಂದ ಚುನಾವಣೆ ನಡೆಯಲಿದೆ.
2000 ಮೌಲ್ವಿಗಳು: ಚುನಾವಣಾ ಪ್ರಚಾರಕ್ಕೆ ಬಿಜೆಪಿ ಬೇರೆ ರಾಜ್ಯಗಳ ಮುಸ್ಲಿಂ ಮೌಲ್ವಿಗಳನ್ನು ಬಳಸಿಕೊಳ್ಳು ತ್ತಿದೆ. 2000ಕ್ಕೂ ಹೆಚ್ಚು ಮೌಲ್ವಿಗಳು ಬಿಜೆಪಿ ಪರವಾಗಿ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾನ ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಮೌಲ್ವಿಗಳು ಭಾಗವಹಿಸುವ ನಿರೀಕ್ಷೆ ಇದೆ.
‘ಮೌಲ್ವಿಗಳು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಅವುಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮುಂದಾಗಿದ್ದಾರೆ’ ಎಂದು ಜಮಾತ್ ಉಲೇಮಾ ಹಿಂದ್್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಸುಹೈಬ್್ ಕ್ವಾಸ್ಮಿ ಹೇಳಿದರು.
ಚುನಾವಣೆ ಮುಂದೂಡಲು ನಕಾರ
ನವದೆಹಲಿ: ಕೆಲ ತಿಂಗಳ ಹಿಂದೆ ಭಾರಿ ಪ್ರವಾಹದಿಂದ ತತ್ತರಿಸಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಂದಕ್ಕೆ ಹಾಕಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ಚುನಾವಣೆ ಮುಂದೂಡಬೇಕು ಎಂದು ಕೋರಿ ಜಮ್ಮು ಮತ್ತು ಕಾಶ್ಮೀರ ಅವಾಮಿ ನ್ಯಾಷನಲ್ ಕಾನ್ಫರೆನ್ಸ್್ (ಎಎನ್ಸಿ) ಅರ್ಜಿ ಸಲ್ಲಿಸಿತ್ತು.
ಚುನಾವಣೆಯನ್ನು ಮುಂದಕ್ಕೆ ಹಾಕಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂಬ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಮತ್ತು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಒಳಗೊಂಡ ನಿರಾಕರಿಸಿದೆ. ಪ್ರವಾಹದಿಂದ ನಲುಗಿರುವ ರಾಜ್ಯದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯ ನಡೆಯುತ್ತಿರುವ ಕಾರಣದಿಂದ ಚುನಾವಣೆ ಸದ್ಯಕ್ಕೆ ಬೇಡ ಎಂದು ಅರ್ಜಿ ಸಲ್ಲಿಸಲಾಗಿತ್ತು.
ಪ್ರವಾಹದಿಂದಾಗಿ ಕಾಶ್ಮೀರದಲ್ಲಿನ ಭಾರಿ ಸಂಖ್ಯೆಯ ಜನರು ಸ್ಥಳಾಂತರಗೊಂಡಿದ್ದಾರೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಎಎನ್ಸಿ ಪರ ಹಾಜರಾಗಿದ್ದ ವಕೀಲ ರಾಜೀವ್ ಧವನ್ ಹೇಳಿದರು. ಇದಕ್ಕೂ ಮೊದಲು ಪ್ರತ್ಯೇಕ ಪೀಠ ಚುನಾವಣೆ ಮುಂದೂಡುವ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅವರ ಪೀಠಕ್ಕೆ ವರ್ಗಾಯಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.