ಮುಂಬೈ: ಜಾಗತೀಕರಣದ ಈ ದಿನಗಳಲ್ಲಿ ಸಂಸ್ಕೃತಿ ನಶಿಸುತ್ತಿದ್ದು ಈ ವಿಷಯದಲ್ಲಿ ಶಿಕ್ಷಣ ನೀಡುವುದು ಇಂದು ಅತ್ಯಗತ್ಯ ಎಂದು ಉದ್ಯಮಿ ಭಾಸ್ಕರ ಎಸ್. ಶೆಟ್ಟಿ ಅವರು ಹೇಳಿದ್ದಾರೆ.
ಅವರು ಇಲ್ಲಿ ಡೊಂಬಿವಲಿಯಲ್ಲಿ ಮೈಸೂರು ಸಂಗೀತ ವಿದ್ಯಾಲಯ ಏರ್ಪಡಿಸಿದ್ದ ಪುರಂದರ- ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ನೀಡುವುದು ಅಗತ್ಯ. ಮೈಸೂರು ಸಂಗೀತ ವಿದ್ಯಾಲಯ ಸಂಗೀತದಲ್ಲಿ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಗೀತ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದವರಿಗೆ ಕರ್ನಾಟಕ ಸರ್ಕಾರದ ಪ್ರಮಾಣ ಪತ್ರಗಳನ್ನು ಅವರು ವಿತರಿಸಿದರು. ಅನಂತರ ವಿದ್ಯಾರ್ಥಿಗಳಿಗೆ ಶಿಷ್ಯವೇತನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸತ್ಯನಾರಾಯಣ ಅಣತಿ ಮತ್ತು ಎಂ.ಬಿ.ನಟರಾಜ್ ಅವರು ಮಾತನಾಡಿದರು.
ಇದಕ್ಕೆ ಮುನ್ನ ಬಾಲಪ್ರತಿಭೆ 7 ವರ್ಷ ವಯಸ್ಸಿನ ಅದಿತಿ ಪ್ರಹ್ಲಾದ್ಳ ಗಾಯನ ಜನ ಮೆಚ್ಚುಗೆ ಗಳಿಸಿತು. ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಹಾಡನ್ನು ಹಿಂದೂಸ್ತಾನಿ, ಕರ್ನಾಟಕ ಮತ್ತು ಸುಗಮ ಸಂಗೀತ ಶೈಲಿಯಲ್ಲಿ ಹಾಡಿದಳು.
ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾಲಯದ ರಾಮು ಶೇಟ್ ಹೆಬ್ಬಳ್ಳಿ, ನಂದಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.