ಚಂಡೀಗಡ: ಸುಮಾರು ೧೨ ಎಕರೆ ಜಾಗದಲ್ಲಿ ಹರಡಿಕೊಂಡಿರುವ ರಾಮ್ಪಾಲ್್ ಆಶ್ರಮ ಈಗ ಬಿಕೋ ಎನ್ನುತ್ತಿದೆ. ಆದರೆ ಇಲ್ಲಿನ ಚಿತ್ರಣವು ಬೇರೆಯದೇ ಕಥೆ ಹೇಳುತ್ತದೆ. ತಮ್ಮನ್ನು ಸಂತ ಎಂದು ಬಿಂಬಿಸಿಕೊಂಡಿರುವ ರಾಮ್ಪಾಲ್ ಈ ಆಶ್ರಮದಲ್ಲಿ ಎಷ್ಟು ಐಷಾರಾಮದಿಂದ ಬದುಕುತ್ತಿದ್ದರು ಎನ್ನುವುದಕ್ಕೆ ಹೆಜ್ಜೆ ಹೆಜ್ಜೆಗೂ ಪುರಾವೆ ಸಿಗುತ್ತದೆ.
ಐದು ಅಂತಸ್ತಿನ ಕಟ್ಟಡದ ಈ ಆಶ್ರಮ ಅಭೇದ್ಯ ಕೋಟೆಯಂತಿದೆ. ಶೋಧ ಕಾರ್ಯಕ್ಕೆಂದು ಒಳಗೆ ಹೋಗುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ಆಶ್ರಮದ ಸುತ್ತಲೂ ೩೦ ಅಡಿ ಎತ್ತರದ ದೈತ್ಯ ಗಾತ್ರದ ಗೋಡೆ ನಿರ್ಮಿಸಲಾಗಿದೆ.
ಗ್ರಂಥಾಲಯ, ಎಲ್ಇಡಿ ಪರದೆಯುಳ್ಳ ಸಭಾಂಗಣ, ಈಜುಕೊಳ, ವಿಶಾಲ ಸ್ನಾನಗೃಹ, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ.
ಮರ್ಸಿಡಿಸ್ ಹಾಗೂ ಬಿಎಂಡಬ್ಲು ಕಾರಿನಲ್ಲಿ ರಾಮ್ಪಾಲ್ ಓಡಾಡುತ್ತಿದ್ದರು. ಆಶ್ರಮದ ಸ್ನಾನಗೃಹಗಳಲ್ಲಿ ಅಶ್ಲೀಲ ಸಾಹಿತ್ಯ, ಕಾಂಡೋಮ್ಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ. ಕೆಲವು ಸ್ನಾನಗೃಹಗಳಲ್ಲಿ ಕೂಡ ಸಿಸಿಟಿವಿ ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಆಶ್ರಮದಲ್ಲಿ ಪತ್ತೆಯಾಗಿವೆ. ತಮ್ಮ ಬೆಂಬಲಿಗರನ್ನು ಆಶೀರ್ವದಿಸಲು ರಾಮ್ಪಾಲ್್ ಆಶ್ರಮದ ಪಡಸಾಲೆಗೆ ಬರುವ ಸಮಯದಲ್ಲಿ ಕಣ್ಣುಕೋರೈಸುವ ವಿದ್ಯುದ್ದೀಪಗಳು ಬೆಳಗುತ್ತಿದ್ದವು. ಆಶ್ರಮದಲ್ಲಿ ವೈದ್ಯಕೀಯ ಕೇಂದ್ರ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಅನುಯಾಯಿಗಳು ಮದ್ಯ, ಧೂಮಪಾನ, ಮಾಂಸ, ಮೊಟ್ಟೆ, ಜೂಜು ಎಲ್ಲವನ್ನು ಬಿಡಬೇಕು ಎಂದು ರಾಮ್ಪಾಲ್ ತಾಕೀತು ಮಾಡುತ್ತಿದ್ದರು. ಆಶ್ರಮದಲ್ಲಿ ಹಾಡು, ನರ್ತನಕ್ಕೆ ಅವಕಾಶ ಇರಲಿಲ್ಲ. ಬೇರೆ ದೇವರ ಆರಾಧನೆಗೆ ನಿರ್ಬಂಧ ಹೇರಲಾಗಿತ್ತು.
ಸೂಫಿ ಸಂತ ಕಬೀರ್ ಅವರನ್ನು ‘ಅಧಿದೈವ’ ಎಂದು ಹೇಳುವ ರಾಮ್ಪಾಲ್್, ತ್ರಿಮೂರ್ತಿ (ಬ್ರಹ್ಮ, ವಿಷ್ಣು, ಮಹೇಶ್ವರ) ಪರಿಕಲ್ಪನೆಯನ್ನು ಖಂಡಿಸುತ್ತಾರೆ ಎನ್ನುತ್ತಾರೆ ಬೆಂಬಲಿಗರು
ಶೋಧ: ರಾಮ್ಪಾಲ್
ಅವರನ್ನು ಬಂಧಿಸಿದ ಬೆನ್ನಲ್ಲಿಯೇ ಪೊಲೀಸರು ಅವರ ಸತ್ಲೋಕ್್ ಆಶ್ರಮದಲ್ಲಿ ಗುರುವಾರ ಶೋಧ ನಡೆಸಿದರು.
‘ನೀವು ಹೊರಗೆ ಹೋಗಬೇಡಿ. ನಿಮಗೆ ತೊಂದರೆಯಾಗುತ್ತದೆ. ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ’ ಎಂದು ರಾಮ್ಪಾಲ್್ ಹಾಗೂ ಅವರ ಕಮಾಂಡೊಗಳು ಬೆಂಬಲಿಗರನ್ನು ಹೆದರಿಸುತ್ತಿದ್ದರು ಎನ್ನುವುದನ್ನು ಆಶ್ರಮದಿಂದ ಹೊರಕ್ಕೆ ಬಂದ ಕೆಲವರು ಬಹಿರಂಗಪಡಿಸಿದ್ದಾರೆ.
ಆರೋಪ ಅಲ್ಲಗಳೆದ ರಾಮ್ಪಾಲ್: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ತಾವು ಆಶ್ರಮದೊಳಗೆ ಬೆಂಬಲಿಗರನ್ನು ಗುರಾಣಿಯಾಗಿ ಬಳಸಿಕೊಂಡ ಆರೋಪವನ್ನು ರಾಮ್ಪಾಲ್್ ಅಲ್ಲಗಳೆದಿದ್ದಾರೆ.
ವಿಶೇಷ ತನಿಖಾ ತಂಡ: ರಾಮ್ಪಾಲ್ ವಿರುದ್ಧದ ಹೊಸ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲು ಹಿಸ್ಸಾರ್ ಎಸ್ಪಿ ಸತ್ಯೇಂದ್ರಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗುತ್ತಿದೆ.
ಕ್ಷೀರ ಸ್ನಾನದ ಪಾಯಸ
ಸ್ಥಳೀಯರು ಹೇಳುವ ಪ್ರಕಾರ ರಾಮ್ಪಾಲ್್ ನಿತ್ಯವೂ ಹಾಲಿನಿಂದ ಸ್ನಾನಮಾಡುತ್ತಿದ್ದರು. ಈ ಹಾಲನ್ನು ಪಾಯಸ ಮಾಡಿ ಭಕ್ತರಿಗೆ ಪ್ರಸಾದವಾಗಿ ಕೊಡಲಾಗುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.