ಜಮ್ಮು/ನವದೆಹಲಿ: ಕಠುವಾದ ಎಂಟು ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿ ಹತ್ಯೆಯಾಗುವುದಕ್ಕೂ ಮುನ್ನ ನಿದ್ರಾಜನಕ ಮಾತ್ರೆಗಳನ್ನು ಮಿತಿಮೀರಿದ ಪ್ರಮಾಣದ ಒತ್ತಾಯಪೂರ್ವಕವಾಗಿ ನೀಡಿದ್ದರಿಂದ ಆಕೆ ಕೋಮಾಗೆ ಹೋಗಿದ್ದಿರಬಹುದು ಎಂದು ವಿಧಿವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಬಾಲಕಿಯ ಒಳಾಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬಾಲಕಿಗೆ ಸ್ಥಳೀಯವಾಗಿ ಸಿಗುವ ‘ಮನ್ನಾರ್’ ಎಂಬ ಗಾಂಜಾ ಹಾಗೂ ನಿದ್ರೆ ಬರಿಸುವ ಮಾತ್ರೆ ನೀಡಿದ್ದರ ಪರಿಣಾಮ ಎಷ್ಟಿದೆ ಎಂಬ ಮಾಹಿತಿ ನೀಡುವಂತೆ ಪೊಲೀಸರು ಕೇಳಿದ್ದರು.
ಬಾಲಕಿಗೆ ನೀಡಿರುವ ಮಾತ್ರೆಯು ಆಕೆಯನ್ನು ಕೋಮಾಗೆ (ಪ್ರಜ್ಞಾಹೀನ ಸ್ಥಿತಿಗೆ) ತಳ್ಳಿದೆ ಎಂದು ವೈದ್ಯಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಬಾಲಕಿ ಮೇಲೆ ನಡೆದ ಭೀಕರ ದೌರ್ಜನ್ಯದಿಂದಾಗಿ ಆಕೆ ಸಹಾಯ ಯಾಚಿಸಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ವೈದ್ಯಕೀಯ ಪರೀಕ್ಷೆ ವಿಸ್ತೃತ ವರದಿ ಪಡೆಯಲು ಪೊಲೀಸರು ನಿರ್ಧರಿಸಿದ್ದರು.
ಜನವರಿ 11, 2018ರಂದು ಬಾಲಕಿಗೆ ಕ್ಲೊನಜೆಪಾಮ್ 0.5 ಎಂ.ಜಿಯ ಐದು ಮಾತ್ರೆಗಳನ್ನು ಕೊಡಲಾಗಿತ್ತು. ಇದು ನಿಗದಿತ ಪ್ರಮಾಣಕ್ಕಿಂತ ಹೆಚ್ಚು. ಇದು ಅರೆನಿದ್ರಾವಸ್ಥೆ, ಗೊಂದಲ, ದುರ್ಬಲತೆ, ಉಸಿರಾಟ ನಿಲ್ಲಿಸುವುದು ಮತ್ತು ಕೋಮಾ ತಲುಪುವಂತೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ತಜ್ಞರ ವರದಿಯನ್ನು ಪಂಜಾಬ್ನ ಪಠಾಣ್ಕೋಟ್ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ಮುಂದಿನ ವಾರ ವಿಚರಣೆಗೆ ಬರುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ವಿಚಾರಣೆಯನ್ನು ಕಥುವಾದಿಂದ ಪಠಾಣ್ಕೋಟ್ಗೆ ವರ್ಗಾಯಿಸಲಾಗಿತ್ತು.