ನವದೆಹಲಿ (ಪಿಟಿಐ): ಕೇರಳದ ಶ್ರೀ ಪದ್ಮನಾಭಸ್ವಾಮಿ ದೇಗುಲದ ಆಡಳಿತ ನಿರ್ವಹಣೆ ಹಾಗೂ ಸಂಪತ್ತಿನ ರಕ್ಷಣೆಯಲ್ಲಿ ಭಾರಿ ಲೋಪವಾಗಿದೆ ಎಂದು ನ್ಯಾಯಾಲಯದ ಸಹಾಯಕ ಗೋಪಾಲ ಸುಬ್ರಮಣಿಯಮ್ ಎತ್ತಿದ ಆತಂಕಕ್ಕೆ ಸುಪ್ರೀಂಕೋರ್ಟ್ನಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ನಿಜಕ್ಕೂ ಇದೊಂದು ಗಂಭೀರ ವಿಷಯ. ತಕ್ಷಣವೇ ಈ ದಿಸೆಯಲ್ಲಿ ಗಮನಹರಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ನ್ಯಾಯಮೂರ್ತಿಗಳಾದ ಆರ್.ಎಂ.ಲೋಧಾ ಹಾಗೂ ಎ.ಕೆ.ಪಟ್ನಾಯಕ್ ಇದ್ದ ಪೀಠ ಬುಧವಾರ ಹೇಳಿದೆ.
ದೇಗುಲದ ದೈನಂದಿನ ವ್ಯವ ಹಾರದಲ್ಲಿ ಈಗಿನ ಟ್ರಸ್ಟಿ ಹಾಗೂ ಅವರ ಕುಟುಂಬದ ಸದಸ್ಯರು ಮೂಗು ತೂರಿಸದಂತೆ ನಿರ್ದೇಶನ ನೀಡ ಬೇಕೆಂದು ಸುಬ್ರಮಣಿಯಮ್ ಕೋರಿಕೊಂಡಿದ್ದರು.
ದೇಗುಲದ ನೆಲಮಾಳಿಗೆಯ ಕೀಲಿ ಕೈಗಳನ್ನು ಜಿಲ್ಲಾ ನ್ಯಾಯಾಧೀಶರಿಂದ ನೇಮಕಗೊಂಡ ಅಧಿಕಾರಿಗೆ ಹಸ್ತಾಂತರಿಸಬೇಕೆಂದೂ ಆಗ್ರಹಿಸಿದ್ದರು.
ಕೀಲಿ ಕೈ ಹಸ್ತಾಂತರ?: ಸುಬ್ರಮಣಿಯಮ್ ಕೋರಿಕೆಯಂತೆ ಜಿಲ್ಲಾ ನ್ಯಾಯಾಧೀಶರಿಂದ ನೇಮಕಗೊಂಡ ಅಧಿಕಾರಿಗೆ ನೆಲಮಾಳಿಗೆ ಕೀಲಿ ಕೈಗಳನ್ನು ಹಸ್ತಾಂತರಿಸುವ ಸುಳಿವನ್ನು ಕೋರ್ಟ್ ನೀಡಿದೆ.
ಅರ್ಜಿದಾರರಾದ ತಿರುವಾಂಕೂರು ರಾಜಮನೆತನ, ರಾಜ್ಯ ಸರ್ಕಾರದ ಹೇಳಿಕೆಗಳನ್ನು ದಾಖಲಿಸಿಕೊಂಡು ಗುರುವಾರ ಈ ಸಂಬಂಧ ಆದೇಶ ನೀಡಲಾಗುವುದು ಎಂದು ಪೀಠ ಹೇಳಿದೆ.