ನವದೆಹಲಿ (ಪಿಟಿಐ): ‘ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆದಷ್ಟು ಶೀಘ್ರ ಬಗೆಹರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಸೌಲಭ್ಯ ವಿತರಣೆಯನ್ನು ಆಧಾರ್ಗೆ ಜೋಡಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ವಿದ್ಯಾರ್ಥಿಗಳಿಗೆ ಗೌರವಧನ ಮತ್ತು ವಿದ್ಯಾರ್ಥಿವೇತನ ನೀಡುವಲ್ಲಿ ವಿಳಂಬವಾಗಬಾರದು.
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶೀಘ್ರ ಹಾಗೂ ಸಮರ್ಪಕ ಪರಿಹಾರ ನೀಡುವುದು ಅಗತ್ಯ’ ಎಂದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಸ್ವಚ್ಛ ಭಾರತ’ದಡಿ ಕೈಗೆತ್ತಿಕೊಂಡಿರುವ ಕಸದಿಂದ ಗೊಬ್ಬರ ತಯಾರಿಕೆ ಹಾಗೂ ಕಸದಿಂದ ವಿದ್ಯುತ್ ಉತ್ಪಾದನೆಯಲ್ಲಿ ಆಗಿರುವ ಪ್ರಗತಿಯನ್ನೂ ಅವರು ಪರಿಶೀಲಿಸಿದರು.
ವಿವಿಧ ರಾಜ್ಯಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
ಭಿಲಾಯಿ ಉಕ್ಕು ಘಟಕದ ವಿಸ್ತರಣೆ ಹಾಗೂ ನವೀಕರಣದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ, ಅತಿ ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.