ಭಾಯಾಗಡ್: (ನ್ಯಾಮತಿ): ‘ಸೂರಗೊಂಡನಕೊಪ್ಪದ ಭಾಯಾಗಡ್ನ ಸಂತ ಸೇವಾಲಾಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಂಗಳವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 284ನೇ ಜಯಂತ್ಯುತ್ಸವ ಹಾಗೂ ವಿವಿಧ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
‘ಮಾರ್ಚ್ ತಿಂಗಳಲ್ಲಿ ಹೊನ್ನಾಳಿ ಅಥವಾ ನ್ಯಾಮತಿಯಲ್ಲಿ ಸಮಾವೇಶ ನಡೆಸಿ 52,000 ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗುವುದು’ ಎಂದು ಅವರು ತಿಳಿಸಿದರು.
‘ಈಗಾಗಲೇ ಹಕ್ಕುಪತ್ರ ನೀಡಿರುವ 52,000 ಫಲಾನುಭವಿಗಳಿಗೆ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಲಿಡ್ಕರ್ ಮಾದರಿಯಲ್ಲೇ ಕಾರ್ಯಕ್ರಮ ರೂಪಿಸಲಾಗುವುದು. ಬಂಜಾರ ಸಮುದಾಯ ಹೆಚ್ಚು ಇರುವ ಕಡೆ ಮಕ್ಕಳ ಶಿಕ್ಷಣಕ್ಕೆ ವಿಶೇಷ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು’ ಎಂದು ಹೇಳಿದರು.
‘ಶಿವಮೊಗ್ಗ– ರಾಣೆಬೆನ್ನೂರು ರೈಲು ಮಾರ್ಗದಲ್ಲಿ ಸೂರಗೊಂಡನ ಕೊಪ್ಪ ಭಾಯಾಗಡ್ದಲ್ಲಿ ರೈಲು ನಿಲ್ದಾಣ ಮಂಜೂರು ಮಾಡಿಸಲು ಯತ್ನಿಸಲಾಗುತ್ತಿದೆ. ಸಮಾಜದ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.