ಬೆಂಗಳೂರು: ‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಥಿಲಾವಸ್ಥೆಯಲ್ಲಿರುವ 36,000 ಕೊಠಡಿಗಳನ್ನು ನೆಲಸಮ ಮಾಡಲು ಸೂಚಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕೊಠಡಿಗಳನ್ನು ನೆಲಸಮ ಮಾಡುವ ಕಡೆಗಳಲ್ಲಿ ಬೇರೆ ಕೊಠಡಿಗಳೂ ಲಭ್ಯ ಇವೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದರು.
ಸರ್ಕಾರ ಈ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ₹ 18,200 ಕೋಟಿ ಒದಗಿಸಿದೆ. ಇದaರಲ್ಲಿ ಬಹುಪಾಲು ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳಿಗೆ ಖರ್ಚಾಗುತ್ತದೆ. ಕಟ್ಟಡಗಳ ದುರಸ್ತಿಗೆ ಕಳೆದ ವರ್ಷ ₹ 124 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
‘ಶಾಲೆಗಳ ದುರಸ್ತಿಗೆ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 50 ಕೋಟಿಯಿಂದ ₹ 100 ಕೋಟಿ ಹಣ ಒದಗಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ಶಾಸಕರ ನಿಧಿ ಬಳಕೆ: ‘ಶಾಸಕರ ನಿಧಿಯನ್ನು ಶಾಲಾ ಕೊಠಡಿಗಳ ದುರಸ್ತಿಗೆ ಬಳಸಲು ಅವಕಾಶ ಇಲ್ಲ. ಇನ್ನು ಮುಂದೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶೇ 30ರಷ್ಟು ಹಣವನ್ನು ಅವರ ಕ್ಷೇತ್ರದ ಶಾಲಾ ಕೊಠಡಿಗಳ ದುರಸ್ತಿಗೆ ಮೀಸಲಿಡುವಂತೆ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವರಿಗೆ ಮನವಿ ಸಲ್ಲಿಸಲಾಗಿದೆ’ ಎಂದೂ ತನ್ವೀರ್ ಸೇಠ್ ಹೇಳಿದರು.