ಬಾಗಲಕೋಟೆ: ‘ಸಿಎಂ ಸಿದ್ದರಾಮಯ್ಯ ಜೆಡಿಎಸ್, ಬಿಜೆಪಿಯವರು ಅವರಪ್ಪನಾಣೆಗೂ ಅಧಿಕಾರಕ್ಕೆ ಬರೋದಿಲ್ಲ ಅಂತಾರೆ. ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಮೊದಲು ಅವರಪ್ಪನ ಆಣೆ ಮಾಡಿ ಹೇಳಲಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
‘ನನ್ನ ಹೋರಾಟದ ಫಲವಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.
ಸಿವೋಟರ್ಸ್ ಮಾಲೀಕ ಸಿದ್ದರಾಮಯ್ಯ ಅವರ ಆಪ್ತ. ಅವರಿಗೆ ಹಣ ನೀಡಿ ಸಮೀಕ್ಷೆ ಮಾಡಿಸಿದ್ದಾರೆ’ ಎಂದು ಸಿವೋಟರ್ಸ್ ಸಮೀಕ್ಷೆ ಕುರಿತು ಅಸಹನೆ ವ್ಯಕ್ತಪಡಿಸಿದರು.
ಅವರದ್ದು ಬೊಗಳೆ ಭಾಷಣ, ಹೇಳಿದ ಕೆಲಸ ಮಾಡದೆ ಹೊರಟ ಸಿದ್ದರಾಮಯ್ಯ ‘ಹಿಟ್ ಆ್ಯಂಡ್ ರನ್’ ಸಿಎಂ ಎಂದರು.
ಕರಾವಳಿಯಲ್ಲಿ ಒಂದು ಪಕ್ಷ ರಕ್ತದೋಕುಳಿ ಆಡುತ್ತಿದ್ದರೆ, ಇನ್ನೊಂದು ಪಕ್ಷ ಆಡಲಿ ಬಿಡಿ ಎನ್ನುತ್ತಿದೆ. ಧರ್ಮದ ಹೆಸರಿನಲ್ಲಿರುವ ಎಲ್ಲಾ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಲಿ. ಧರ್ಮದ ಹೆಸರಿನಲ್ಲಿ ರಕ್ತದೋಕುಳಿ ಆಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಚುನಾವಣೆಯಲ್ಲಿ ಮೈತ್ರಿ:
ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಣ್ಣಪುಟ್ಟ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿದ್ದೇವೆ. ಬಾಗಲಕೋಟೆ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ರಾಜ್ಯದಲ್ಲಿ ಜನ ಹೊಸ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕನಿಷ್ಟ 60 ಸ್ಥಾನ ಗೆಲ್ಲುವ ಗುರಿ ಇದೆ ಎಂದರು.