ಚಿಕ್ಕಬಳ್ಳಾಪುರ: 'ನಾನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಗೇಪಲ್ಲಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
'ಸರ್ಕಾರದ ಸಾಧನಾ ಸಮಾವೇಶ ಕಾರ್ಯಕ್ರಮ ನನ್ನ ದುಡ್ಡಲ್ಲಿ ಮಾಡಲು ಆಗುತ್ತದೆಯೆ? ಆ ವಿಚಾರವಾಗಿ ಈಗ ಮಾತನಾಡುತ್ತಿರುವವರೆಲ್ಲ ಹಿಂದೆ ತಮ್ಮ ದುಡ್ಡಲ್ಲಿ ಸಮಾವೇಶ ಮಾಡಿದ್ದರಾ? ಪ್ರಧಾನಿ ಮೋದಿ ಅವರು ಎಲ್ಲಾ ಕಡೆ ಅವರ ದುಡ್ಡಲ್ಲೇ ಹೋಗ್ತಾರಾ' ಎಂದು ಪ್ರಶ್ನಿಸಿದರು.
'ಈಶ್ವರಪ್ಪನಿಗೆ ಬುದ್ದಿ ಕಡಿಮೆ, ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಸೋಲುತ್ತಾರೆ. ಅವರ ಬಗ್ಗೆ ಏನು ಮಾತನಾಡುವುದು. ಅವರು ಅಧಿಕಾರಕ್ಕೆ ಬರುವುದಿಲ್ಲ. ನಾವು ಅಧಿಕಾರಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರಿಂದ ಹೈಕಮಾಂಡ್ ಗೆ ಕಪ್ಪ ಸಾಗಿಸುತ್ತಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಕೇಳಲಾದ ಪ್ರಶ್ನೆಗೆ, 'ಅದು ಅತ್ಯಂತ ಬೇಜವಾಬ್ದಾರಿ ಹೇಳಿಕೆ. ಅವರಲ್ಲಿ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ' ಎಂದರು.