ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌದದಲ್ಲಿ ಗುರುವಾರ ದೇಶದ ಪ್ರಥಮ ಕೃಷಿ ಬಜೆಟ್ ಮಂಡನೆಯ ಹಿಂದೆಯೇ 2011-12 ಸಾಲಿನ ಸಾಮಾನ್ಯ ಬಜೆಟ್ನ್ನು ಮಂಡಿಸಿದರು.
2011-12 ರ ಸಾಲಿನ ಒಟ್ಟು ಜಮೆ 83,729 ಕೋಟಿ ರೂ. ನೀರಿಕ್ಷೆ ಇದ್ದು. ಇದರಲ್ಲಿ 66,313ಕೋಟಿ, ರಾಜಸ್ವ ಜಮೆ ಹಾಗೂ 17,416ಕೋಟಿ ಬಂಡವಾಳ ಜಮೆ ಸೇರಿದೆ. ಹಾಗೆಯೇ 85,319 ಕೋಟಿ ರೂ. ಒಟ್ಟು ವೆಚ್ಚವೆಂದು ಅಂದಾಜಿಸಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಒಟ್ಟು 67,792 ಕೋಟಿ ರೂ. ಹಣವನ್ನು ಹೂಡಿಕೆ ಮಾಡಲಾಗಿದೆ. ಇದಕ್ಕಾಗಿ 91 ಯೋಜನೆಗಳನ್ನು ರೂಪಿಸಲಾಗಿದೆ.
ಆಯವ್ಯಯದ ವಿವರ: ಹೊಸ ರೈಲು ಮಾರ್ಗ ನಿರ್ಮಾಣ ಅಥವಾ ಗೇಜ್ ಪರಿವರ್ತನೆಗಾಗಿ ರಾಜ್ಯ ಸರ್ಕಾರವು ತನ್ನ ಪಾಲದ ಶೇ. 50ರಷ್ಟು ಹಣವನ್ನು ಭರಿಸುತ್ತದೆ. ಪ್ರಸ್ತುತ ಪ್ರಗತಿಯಲ್ಲಿರುವ ರೈಲು ಕಾಮಗಾರಿಗಳಿಗೆ 2011-12 ನೇ ಸಾಲಿನಲ್ಲಿ 478 ಕೋಟಿ ರೂ. ಮೀಸಲಿಡಲಾಗಿದೆ.
ಬಳ್ಳಾರಿ, ಗುಲ್ಬರ್ಗಾ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 120 ಕೋಟಿ ರೂ. ಒದಗಿಸಲಾಗುವುದು.
ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ 15 ಕೋಟಿ ರೂ ನಿಗದಿ ಮಾಡಲಾಗಿದೆ. ಸುಸ್ಥಿರ ಕರಾವಳಿ ಮತ್ತು ನಿರ್ವಾಹಣ ಯೋಜನೆಗೆ ಒಟ್ಟು 941 ಕೋಟಿ ರೂ. ನೆರವು ನೀಡಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಅನುಮೋದನೆ ನೀಡಿದೆ.
2011-12 ಸಾಲಿನಲ್ಲಿ ಉಲ್ಲಾಳದಲ್ಲಿ ಮೊದಲನೆ ಹಂತದ ಸಮುದ್ರ ಕೊರೆತೆ ತಡೆ ಕಾಮಗಾರಿಯನ್ನು 350 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಕುಂದಾಪುರ ತಾ. ಮರುವಂತೆಯಲ್ಲಿ ಕೇರಳ ಮಾದರಿಯಲ್ಲಿ ಹೊರ ಬಂದರು ನಿರ್ಮಿಸಲು 45 ಕೋಟಿ ರೂ. ಅನುದಾನ.
ಬೆಂಗಳೂರು ಮೆಟ್ರೊ: 42.3ಕಿಮೀ ಒಳಗೊಂಡ ಬೆಂಗಳೂರು ಮೆಟ್ರೊ ಯೋಜನೆಯ ಮೊದಲ ಹಂತ 2013ರ ಜೂನ್ ವೇಳೆಗೆ ಪೂರ್ಣ ಗೊಳ್ಳಲಿದೆ. ಈಗಾಗಲೇ 2600 ಕೋಟಿ ರೂ. ಆರ್ಥಿಕ ಸಹಾಯದನ ನೀಡಿರುವ ರಾಜ್ಯ ಸರ್ಕಾರ ಪ್ರಸಕ್ತ ಮುಂಗಡ ಪತ್ರದಲ್ಲಿ 683 ಕೋಟಿ ರೂ. ಮೀಸಲಿಡಲಾಗಿದೆ.
ಬಜೆಟ್ನ ವಿವರ
ಇನ್ನೂ ಹಲವಾರು ಯೋಜನೆಗಳನ್ನು 2011-12 ಸಾಲಿನ ಬಜೆಟ್ ಒಳಗೊಂಡಿದೆ.
-ಬೆಂಗಳೂರಿನಲ್ಲಿ ಭುವನೇಶ್ವರಿ ದೇವಿ ಮೂರ್ತಿ ಸ್ಥಾಪನೆಗೆ 25 ಕೋಟಿ ರೂ.
-ಮೈಸೂರು ದಸರಾವನ್ನು ನಾಡುಹಬ್ಬವಾಗಿ ಆಚರಿಸಲು 10 ಕೋಟಿ ರೂ. ಮೀಸಲು.
-ಬಸವ ಅಂತರ ರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.
-ಜನಪದ ವಿವಿ ಕೇಂದ್ರ ಕಚೇರಿ ಶಿಗ್ಗಾವಿಯಲ್ಲಿ ಸ್ಥಾಪನೆ.
-ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಗೆ 5 ಕೋಟಿ ರೂ.
- ಲಂಡನ್ ನಲ್ಲಿ ಬಸವ ಪುತ್ಥಳಿ ನಿರ್ಮಿಸಲು 3 ಕೋಟಿ ರೂ. ಮೀಸಲು.
-446 ದೇವಸ್ಥಾನಗಳಲ್ಲಿ ವಸತಿ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯ ಒದಗಿಸಲು 20 ಕೋಟಿ ರೂ. ಮೀಸಲು.
-ಭತ್ತ, ಅಕ್ಕಿ, ಗೋಧಿ ಹಾಗೂ ಬೇಳೆ ಕಾಳಗಳ ಮೇಲಿನ ತೆರೆಗೆ ವಿನಾಯಿತಿ ಮುಂದುವರೆಯುವಿಕೆ.
-ಬಂಗಾರ ಮತ್ತು ಬೆಲೆ ಬಾಳುವ ಲೋಹ, ಆಭರಣಗಳು ಮತ್ತು ವಸ್ತುಗಳು ಹಾಗೂ ಅಮೂಲ್ಯ- ಅರೆ ಅಮೂಲ್ಯ ಹರಳುಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 1ರಿಂದ 2ಕ್ಕೆ ಏರಿಸಲು ಚಿಂತನೆ....
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.