ಬೆಂಗಳೂರು: ರಾಜ್ಯ ಸರ್ಕಾರ ‘ಬಡ್ತಿ ಮೀಸಲಾತಿ ಕಾಯ್ದೆ–2018’ ಅನ್ನು ಜಾರಿಗೊಳಿಸದಂತೆ ಆಗ್ರಹಿಸಿ ಇದೇ 11ರಂದು ಫ್ರೀಡಂ ಪಾರ್ಕ್ನಲ್ಲಿ ಬೆಳಿಗ್ಗೆ 10ರಿಂದ5 ರವರೆಗೆ ಧರಣಿ ನಡೆಸಲು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ (ಅಹಿಂಸಾ) ನೌಕರರ ಒಕ್ಕೂಟ ನಿರ್ಧರಿಸಿದೆ.
ಸರ್ಕಾರದ ‘ಬಡ್ತಿ ಮೀಸಲು– ಕಾಯ್ದೆ 2002’ ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಫೆ. 9 ನೀಡಿದ ತೀರ್ಪು ಪಾಲನೆ ಆಗಿಲ್ಲ ಎಂದು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಇದೇ 9ರಿಂದ ಮತ್ತೆ ಮುಂದುವರಿಯಲಿದೆ.
ಕಾಯ್ದೆ ರದ್ದುಗೊಳಿಸಿ ನೀಡಿದ ತೀರ್ಪು ಪಾಲನೆಯಿಂದ ಹಿಂಬಡ್ತಿ ಪಡೆಯುವ ನೌಕರರ ಹಿತರಕ್ಷಣೆಗೆ ಸರ್ಕಾರ ಹೊಸ ಕಾಯ್ದೆ ರೂಪಿಸಿತ್ತು. ಹೊಸ ಕಾಯ್ದೆ ವಿಷಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಅ. 10ರಂದು ಮೌಖಿಕವಾಗಿ ಹೇಳಿದೆ. ಆದರೂ ಕಾಯ್ದೆ ಜಾರಿಗೊಳಿಸುವಂತೆ ಪರಿಶಿಷ್ಟ ಸಮುದಾಯದ ನೌಕರರರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಒಕ್ಕೂಟದ ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜು ದೂರಿದ್ದಾರೆ.