ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದ್ದ ಎನ್ನಲಾದ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ, ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹೆಚ್ಚು ಬಾರಿ ಮೊಬೈಲ್ ಬಳಸಿ ಹಲವರಿಗೆ ಕರೆ ಮಾಡಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿರುವುದಾಗಿ ಗೊತ್ತಾಗಿದೆ. ಈ ಆಯಾಮದಲ್ಲೂ ಎಸಿಪಿ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ.
‘ಯುವರಾಜ್ ಎಂಬಾತನಿಂದ ಜೈಲಿನಿಂದ ಎರಡು– ಮೂರು ಬಾರಿ ಕರೆಗಳು ಬಂದಿದ್ದವು. ಜೊತೆಗೆ, ಅಪರಿಚಿತರು ನನ್ನ ಮೊಬೈಲ್ ಕದ್ದಾಲಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಅರವಿಂದ ಬೆಲ್ಲದ ಇತ್ತೀಚೆಗಷ್ಟೇ ದೂರು ನೀಡಿದ್ದಾರೆ. ಅದರ ವಿಚಾರಣೆ ಚುರುಕುಗೊಳಿಸಿರುವ ಕಬ್ಬನ್ ಪಾರ್ಕ್ ಉಪವಿಭಾಗ ಎಸಿಪಿ ನೇತೃತ್ವದ ತಂಡ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭಾನುವಾರ ಭೇಟಿ ನೀಡಿತು.
ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರು ಪರಿಚಯಸ್ಥರೆಂದು ಹೇಳಿಕೊಂಡು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಯುವರಾಜ್ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಕೇಂದ್ರ ಕಾರಾಗೃಹದ ವಾಸದಲ್ಲಿದ್ದಾನೆ.
ಅದೇ ಕಾರಣಕ್ಕೆ ಕಾರಾಗೃಹಕ್ಕೆ ತೆರಳಿದ್ದ ತಂಡ, ವಿಶೇಷ ಕೊಠಡಿಯಲ್ಲಿ ಯುವರಾಜ್ನನ್ನು ವಿಚಾರಣೆ ನಡೆಸಿತು. ಇದೇ ಸಂದರ್ಭದಲ್ಲಿ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಗೆ ಕಳುಹಿಸಲಾಗಿತ್ತು.
‘ಎಸಿಪಿ ನೇತೃತ್ವದ ತಂಡವು ಯುವರಾಜ್ನನ್ನು ಒಂದೂವರೆ ಗಂಟೆಗಳವರೆಗೆ ವಿಚಾರಣೆ ನಡೆಸಿ ಹೇಳಿಕೆ ಪಡೆಯಿತು. ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆ ಹಾಕಿತು’ ಎಂದು ಮೂಲಗಳು ಹೇಳಿವೆ.
ಪ್ರಕರಣಕ್ಕೆ ತಿರುವು ಕೊಟ್ಟ ಹೇಳಿಕೆ:
ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿರುವ ಬಗ್ಗೆ ಯುವರಾಜ್ ನೇರವಾದ ಹೇಳಿಕೆ ನೀಡಿದ್ದು, ಅದು ಪ್ರಕರಣಕ್ಕೆ ಹೊಸ ತಿರುವು ನೀಡಿರುವುದಾಗಿ ಗೊತ್ತಾಗಿದೆ.
‘2020ರ ಡಿಸೆಂಬರ್ನಲ್ಲಿ ಯುವರಾಜ್ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ವಿಚಾರಣೆಗಾಗಿ ಹಲವು ಬಾರಿ ಕಸ್ಟಡಿಗೆ ಪಡೆದುಕೊಂಡಿದ್ದರು. ಹೈಗ್ರೌಂಡ್ಸ್ ಠಾಣೆ ಹಾಗೂ ವಿವಿಧ ಠಾಣೆಗಳಲ್ಲೂ ಯುವರಾಜ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣದಲ್ಲೂ ಆತನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಅದೇ ಅವಧಿಯಲ್ಲಿ ಆತ ಮೊಬೈಲ್ ಬಳಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ’ ಎಂದು ಮೂಲಗಳು ಹೇಳಿವೆ.
‘ನನ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಪಾಡಿ’ ಎಂದು ಕೋರಿ ಆರೋಪಿ ಯುವರಾಜ್, ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದ್ದನೆಂಬ ಮಾಹಿತಿ ಇದೀಗ ಸಿಕ್ಕಿದೆ. ಬೆಲ್ಲದ ಮಾತ್ರವಲ್ಲದೇ ಹಲವು ಆಪ್ತರು ಹಾಗೂ ರಾಜಕಾರಣಿಗಳಿಗೂ ಯುವರಾಜ್ ಕರೆ ಮಾಡಿದ್ದಾನೆ. ಆ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.
ಕಾರಾಗೃಹ ಸಿಬ್ಬಂದಿ ಮೇಲೂ ಅನುಮಾನ:
‘ಆರೋಪಿಗೆ ಕೇಂದ್ರ ಕಾರಾಗೃಹದ ಸಿಬ್ಬಂದಿಯೂ ಮೊಬೈಲ್ ಕೊಟ್ಟಿರುವ ಅನುಮಾನವಿದೆ. ಆದರೆ, ಈ ಆರೋಪವನ್ನು ಜೈಲಿನ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಜೈಲಿನಲ್ಲಿ ಜಾಮರ್ ಅಳವಡಿಸಲಾಗಿದ್ದು, ಪ್ರಿಸನ್ ಕಾಲ್ ಬಿಟ್ಟರೆ ಯಾವುದೇ ಮೊಬೈಲ್ ಬಳಸಲು ಆಗುವುದಿಲ್ಲವೆಂದು ಉತ್ತರಿಸಿದ್ದಾರೆ’ ಎಂಬುದಾಗಿಯೂ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.