ಮೋಳೆ (ಬೆಳಗಾವಿ ಜಿಲ್ಲೆ): ಅಸ್ಸಾಂನ ಗವಾಹಟಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಯೋಧ ಗುರುವಾರ ಮೃತರಾಗಿದ್ದಾರೆ.
ಸುನೀಲ ಸದಾಶಿವ ಖಿಲಾರೆ (35) ಮೃತರು. ಈ ಬಗ್ಗೆ ಸೈನ್ಯದವರಿಂದ ಕುಟುಂಬದವರಿಗೆ ಮಾಹಿತಿ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಅವಳಿ–ಜವಳಿ ಹೆಣ್ಣು ಮಕ್ಕಳಿದ್ದಾರೆ.
17 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ತಿಂಗಳಿಂದ ಮಂಗಸೂಳಿಯಲ್ಲೇ ರಜೆ ಮೇಲಿದ್ದರು. ಮೇ 25ರಂದು ಕರ್ತವ್ಯಕ್ಕೆ ಮರಳಿದ್ದರು. ಅವರ ತಂದೆ ಸದಾಶಿವ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸಹೋದರ ರಾಮಚಂದ್ರ ಖಿಲಾರೆ ಕೂಡ ಸೇನೆಯಲ್ಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಇಡೀ ಗ್ರಾಮ ಮೌನದಲ್ಲಿ ಮುಳುಗಿದೆ. ಪಾರ್ಥಿವ ಶರೀರರವನ್ನು ಜುಲೈ 3ರಂದು ಗ್ರಾಮಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ. ‘ಯೋಧನ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ’ ಎಂದು ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಪ್ರತಿಕ್ರಿಯಿಸಿದರು.