ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಕೈದಿ, ಮುರುಗೇಶ ಅಲಿಯಾಸ್ ಮುರುಗ ಅಲಿಯಾಸ್ ಕಣ್ಣಮುಚ್ಚಿಯ ಸುಳಿವು ನಾಲ್ಕು ದಿನಗಳಾದರೂ ಸಿಕ್ಕಿಲ್ಲ.
ಈ ಕೈದಿ, ಜೈಲಿನಿಂದ ಸೋಮವಾರ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ. ಐವರನ್ನು ವಿಕೃತವಾಗಿ ಕೊಚ್ಚಿ ಕೊಲೆ ಮಾಡಿದ್ದ ಈತನಿಗೆ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಆತನ ಸುಳಿವು ನೀಡಿದವರಿಗೆ ನಗದು ಬಹುಮಾನ ಕೊಡುವುದಾಗಿ ಕಾರಾಗೃಹ ಇಲಾಖೆ ತಿಳಿಸಿದೆ. ಈ ನಡುವೆ, ಕರ್ತವ್ಯಲೋಪ ಆರೋಪದ ಮೇಲೆ ಜೈಲರ್ ಸುಷ್ಮಾ ಶಹಾಪುರಕರ, ಎಎಸ್ಐ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ.
‘ಕೈದಿ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ಆತ ತಮಿಳುನಾಡಿನವನಾದ್ದರಿಂದ ಆ ಕಡೆಗೆ ಹೋಗಿರ ಬಹುದು. ಹೀಗಾಗಿ ಆ ಕಡೆಗೆ ಹಾಗೂ ಗೋವಾ, ಮಹಾರಾಷ್ಟ್ರ, ಬೆಂಗಳೂರು ಕಡೆಗೆ ತಂಡಗಳು ತೆರಳಿವೆ.’ ಎಂದು ಹಿಂಡಲಗಾ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಟಿ.ಪಿ. ಶೇಷ ‘ಪ್ರಜಾವಾಣಿ’ಗೆ ತಿಳಿಸಿದರು.