ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್ ವಂಚನೆ: ಮತ್ತೊಂದು ಜಾಲ ಪತ್ತೆ

ಕೇಂದ್ರ ಸಮೀಕ್ಷೆ ತಂಡದ ಹೆಸರಿನಲ್ಲಿ ₹ 21 ಲಕ್ಷ ಪಡೆದು ಮೋಸ
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು/ಕೊಪ್ಪಳ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ₹5 ಕೋಟಿ ಪಡೆದಿದ್ದ ಪ್ರಕರಣದ ಬೆನ್ನಲ್ಲೇ, ಬಿಜೆಪಿ ಟಿಕೆಟ್ ಹೆಸರಿನಲ್ಲಿ ವಂಚಿಸುತ್ತಿದ್ದ ಮತ್ತೊಂದು ಜಾಲ ಪತ್ತೆಯಾಗಿದೆ. 

‘ಬಿಜೆಪಿ ಕೇಂದ್ರ ಘಟಕದ ಸಮೀಕ್ಷೆ ತಂಡದ ಹೆಸರಿನಲ್ಲಿ ಪರಿಚಯವಾಗಿದ್ದ ಕೆಲವರು, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ₹21 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಜಿ. ತಿಮ್ಮರೆಡ್ಡಿ ಗೌಡ ಅವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ‘ಕೊಪ್ಪಳ ಜಿಲ್ಲೆಯ ಕಾರಟಗಿ ನಿವಾಸಿ ತಿಮ್ಮರೆಡ್ಡಿ ಅವರು ತಮಗಾದ ವಂಚನೆ ಬಗ್ಗೆ ಜುಲೈ 19ರಂದು ದೂರು ನೀಡಿದ್ದರು. ಆರೋಪಿಗಳಾದ ದೆಹಲಿಯ ವಿಶಾಲ್ ನಾಗರ್, ಬೆಂಗಳೂರಿನ ಗೌರವ್ ಹಾಗೂ ಜೀತು ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದರು.

ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನ: ‘ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ತಿಮ್ಮರೆಡ್ಡಿ, ತಮ್ಮ ಪತ್ನಿಗೆ 2023ರ ಚುನಾವಣೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ (ಮೀಸಲು ಕ್ಷೇತ್ರ) ಬಿಜೆಪಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದರು. ಈ ಸಂಗತಿಯನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ತಿಮ್ಮರೆಡ್ಡಿ ಅವರಿಗೆ ಬೆಂಗಳೂರಿನ ಜೀತು ಮೂಲಕ ಗೌರವ್ ಹಾಗೂ ವಿಶಾಲ್ ನಾಗರ್ ಪರಿಚಯವಾಗಿತ್ತು. ರೆಸಿಡೆನ್ಶಿ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ವಿಶಾಲ್‌ನನ್ನು ತಿಮ್ಮರೆಡ್ಡಿ ಭೇಟಿಯಾಗಿದ್ದರು. ‘ನಾನು ಬಿಜೆಪಿ ಕೇಂದ್ರ ಸಮೀಕ್ಷೆ ತಂಡದ ಮುಖ್ಯಸ್ಥ. ದೆಹಲಿಯಿಂದ ಕರ್ನಾಟಕಕ್ಕೆ ಬಂದು ಆಕಾಂಕ್ಷಿಗಳ ಪಟ್ಟಿ ಮಾಡುತ್ತಿದ್ದೇವೆ. ಅಮಿತ್ ಶಾ ಹಾಗೂ ಅರುಣ್‌ ಸಿಂಗ್‌ ನನಗೆ ಆಪ್ತರು. ಸಮೀಕ್ಷೆ ವರದಿಯಲ್ಲಿ ನಿಮ್ಮ ಪತ್ನಿ ಹೆಸರು ಸೇರಿಸುತ್ತೇನೆ. ನಾನು ಸೇರಿಸುವ ಹೆಸರು ಅಂತಿಮವಾಗುತ್ತದೆ. ಟಿಕೆಟ್ ಸಹ ಸಿಗುತ್ತದೆ’ ಎಂದು ವಿಶಾಲ್ ಹೇಳಿದ್ದ. ಅದನ್ನು ತಿಮ್ಮರೆಡ್ಡಿ ನಂಬಿದ್ದರು.

‘ಸಮೀಕ್ಷೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ವ್ಯವಸ್ಥೆ ಮಾಡಿಸಬೇಕು. ಇದಕ್ಕಾಗಿ ನೀವು ₹25 ಲಕ್ಷ ಕೊಡಬೇಕು’ ಎಂದು ವಿಶಾಲ್ ಬೇಡಿಕೆ ಇರಿಸಿದ್ದ. ಅದಕ್ಕೆ ಒಪ್ಪಿದ್ದ ತಿಮ್ಮರೆಡ್ಡಿ, ₹21 ಲಕ್ಷ (ವಿಶಾಲ್ ಕೈಗೆ ₹19 ಲಕ್ಷ ಹಾಗೂ ಖಾತೆಗೆ ₹2 ಲಕ್ಷ) ನೀಡಿದ್ದರು. ಇದಾದ ನಂತರ ಆರೋಪಿಗಳು, ತಿಮ್ಮರೆಡ್ಡಿ ಅವರನ್ನು ದೆಹಲಿಗೆ ಕರೆಸಿಕೊಂಡು ನಾಲ್ಕು ದಿನ ಉಳಿಸಿಕೊಂಡಿದ್ದರು. ಟಿಕೆಟ್ ಅಂತಿಮವಾದಾಗ ಪಟ್ಟಿಯಲ್ಲಿ ತಿಮ್ಮರೆಡ್ಡಿ ಅವರ ಪತ್ನಿ ಹೆಸರು ಇರಲಿಲ್ಲ. ಆರೋಪಿಗಳಿಗೆ ಕರೆ ಮಾಡಿದರೆ ಸ್ವೀಕರಿಸಿರಲಿಲ್ಲ. ಕೆಲ ದಿನ ಬಿಟ್ಟು ಕರೆ ಮಾಡಿದಾಗ, ಹಣ ವಾಪಸು ಕೊಡುವುದಾಗಿ ಆರೋಪಿಗಳು ಹೇಳಿದ್ದರು. ಆದರೆ, ಇದುವರೆಗೂ ಹಣ ನೀಡಿಲ್ಲ’ ಎಂಬ ಸಂಗತಿ ದೂರಿನಲ್ಲಿದೆ.

ಸಿಸಿಬಿ ಕಚೇರಿಯಲ್ಲಿ ಕುಸಿದು ಬಿದ್ದ ಚೈತ್ರಾ ಕುಂದಾಪುರ

ಬೆಂಗಳೂರು: ಬಿಜೆಪಿ‌ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿರುವ ಪ್ರಕರಣದ ಆರೋಪಿ ಚೈತ್ರಾ‌ ಕುಂದಾಪುರ ಸಿಸಿಬಿ ಕಚೇರಿಯಲ್ಲಿ ಶುಕ್ರವಾರ ಕುಸಿದು ಬಿದ್ದರು. ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೋಟೆಲ್‌ ಉದ್ಯಮಿ‌ ಗೋವಿಂದ ಬಾಬು ಪೂಜಾರಿ‌ ನೀಡಿದ್ದ ದೂರು ಆಧಾರದಲ್ಲಿ ಚೈತ್ರಾ ಹಾಗೂ ಇತರರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಎಲ್ಲರನ್ನೂ 10 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗುರುವಾರ ಇಡೀ‌ ದಿನ ಚೈತ್ರಾ ವಿಚಾರಣೆ ನಡೆಸಿದ್ದ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಂಜೆ ಬಿಟ್ಟು ಬಂದಿದ್ದರು.‌

ಶುಕ್ರವಾರ ಬೆಳಿಗ್ಗೆ ಪುನಃ ಚೈತ್ರಾ ಅವರನ್ನು ಚಾಮರಾಜಪೇಟೆಯಲ್ಲಿರುವ ಕಚೇರಿಗೆ ಕರೆತಂದಿದ್ದರು.

ವಿಚಾರಣೆ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದ ಚೈತ್ರಾ ಕುಸಿದು ಬಿದ್ದರು. ಬಾಯಿಯಲ್ಲಿ ನೊರೆ ಬರಲಾ
ರಂಭಿಸಿತ್ತು. ಮಹಿಳಾ ಸಿಬ್ಬಂದಿ ಚೈತ್ರಾ ಅವರನ್ನು ತಮ್ಮದೇ ಜೀಪಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ

‘ತುರ್ತು ನಿಗಾ ಘಟಕದಲ್ಲಿ ಚೈತ್ರಾ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ರಕ್ತ, ಇಸಿಜಿ ಹಾಗೂ ಇತರೆ ತಪಾಸಣೆ ನಡೆಸಲಾಗಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ರಮೇಶ್‌ಕುಮಾರ್ ಕೆ. ತಿಳಿಸಿದ್ದಾರೆ.

‘ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಚೈತ್ರಾ ಅವರನ್ನು ಬೆಳಿಗ್ಗೆ 9.15ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ’ ಎಂದಿದ್ದಾರೆ.

ಭಾಷಣ ವೇಳೆ ಕುಸಿದುಬಿದ್ದಿದ್ದ ಚೈತ್ರಾ: ವಿಚಾರಣೆ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಚೈತ್ರಾ ಆರೋಗ್ಯದ ಬಗ್ಗೆ ಸ್ನೇಹಿತರು ಹಾಗೂ ಕುಟುಂಬಸ್ಥರಿಂದ ಸಿಸಿಬಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

‘ಚೈತ್ರಾ ಅವರಿಗೆ ಮೂರ್ಛೆ ರೋಗವಿರುವುದಾಗಿ ಗೊತ್ತಾಗಿದೆ. ಆದರೆ, ಇದು ಗಂಭೀರ ಸ್ವರೂಪ
ದಲ್ಲಿಲ್ಲ. ಈ ಹಿಂದೆ ಧಾರ್ಮಿಕ ಸ್ಥಳವೊಂದರಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೂ ಚೈತ್ರಾ ಕುಸಿದು ಬಿದ್ದಿದ್ದರು. ಆಗಲೂ ಬಾಯಲ್ಲಿ ನೊರೆ ಬಂದಿತ್ತು ಎಂಬುದಾಗಿ ಸ್ನೇಹಿತರು ತಿಳಿಸಿದ್ದಾರೆ. ಆದರೆ, ಮೂರ್ಛೆ ಬೀಳಲು ನಿಖರ ಕಾರಣವೇನು ಎಂಬುದು ವೈದ್ಯರ ವರದಿಯಿಂದ ಗೊತ್ತಾಗಬೇಕು’ ಎಂದು ಸಿಸಿಬಿ
ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶನಿವಾರ ಪುನಃ ವಿಚಾರಣೆ: ‘ಚೈತ್ರಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಿಗ್ಗೆ ಆಸ್ಪತ್ರೆಯಿಂದ ಕಳುಹಿಸುವುದಾಗಿ ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಿಂದ ಹೊರಬಂದರೆ,  ವಿಚಾರಣೆ ಮುಂದುವರಿಸಲಾಗುವುದು’ ಎಂದು ಅಧಿಕಾರಿ ಹೇಳಿದರು.

ಚೈತ್ರಾ ರಕ್ಷಿಸುವ ಪ್ರಶ್ನೆಯೇ ಇಲ್ಲ: ಶೋಭಾ

ಉಡುಪಿ: ‘ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ಬೆಂಬಲಿಸುವ, ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶುಕ್ರವಾರ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರ ಹೆಸರನ್ನು ದುರುಪಯೋಗ ಮಾಡಿಕೊಂಡವರಿಗೆ ಹಾಗೂ ವಂಚನೆ ಮಾಡಿದವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಶಿಕ್ಷೆಯಾಗಬೇಕು’ ಎಂದರು.

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಾಲ್ಕೈದು ತಿಂಗಳ ಹಿಂದೆಯೇ ಹಣ ಪಡೆದಿದ್ದರು. ವಾಪಸು ಕೊಡದಿದ್ದಕ್ಕೆ ದೂರು ನೀಡಿದ್ದೆ. ಈಗ ನಮ್ಮ ನಡುವೆ ಮಾತುಕತೆ ಯಾಗಿದ್ದು, ಸಮಸ್ಯೆ ಬಗೆಹರಿದಿದೆ.
–ಜಿ. ತಿಮ್ಮರೆಡ್ಡಿ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT