ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇದು ಜನ ವಿರೋಧಿ ನಡೆ. ಅಡ್ಡದಾರಿಯ ಮೂಲಕ ಬಹಳ ತರಾತುರಿಯಲ್ಲಿ ಕಾಯ್ದೆಗೆ ಅಂಗೀಕಾರ ನೀಡಲಾಗಿದೆ. ಟೆಂಡರ್ ಕರೆಯದೆ ₹2 ಕೋಟಿ ಮೊತ್ತದವರೆಗಿನ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್ಐಡಿಎಲ್) ಮೂಲಕ ಅನುಷ್ಠಾನಗೊಳಿಸಲು ಅನುವು ಮಾಡಿಕೊಡುವುದು ಈ ಕಾಯ್ದೆಯ ಉದ್ದೇಶ. ಇದರಿಂದ ಭ್ರಷ್ಟಾಚಾರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ. ಕೆಟಿಪಿಪಿ ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಲಿದೆ’ ಎಂದರು.