ಬೆಂಗಳೂರು: ಮೂರು ದಶಕಗಳಿಂದ ಕಾಲೇಜು–ವಿಶ್ವವಿದ್ಯಾಲಯಗಳಲ್ಲಿ ಸ್ಥಗಿತಗೊಂಡಿರುವ ವಿದ್ಯಾರ್ಥಿ ಒಕ್ಕೂಟಗಳ ಕ್ಯಾಂಪಸ್ ಚುನಾವಣೆಗೆ ಚಾಲನೆ ನೀಡಲು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಒಲವು ತೋರಿದ್ದಾರೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ನ.28ರಂದು ನಡೆಯುವ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲು ನಿರ್ಧರಿಸಲಾಗಿದೆ.ಈ ಕುರಿತು ವಿದ್ಯಾರ್ಥಿ ಒಕ್ಕೂಟಗಳು ಮತ್ತು ವಿವಿಧ ರಾಜಕೀಯ ಮುಖಂಡರ ಸಲಹೆ ಪಡೆಯಲು ಇಲಾಖೆ ಚಿಂತನೆ ನಡೆಸಿದೆ.
‘ಯುವಜನರಲ್ಲಿ ನಾಯಕತ್ವ ಗುಣ ಬೆಳೆಸಲು, ಭವಿಷ್ಯದ ನಾಯಕರನ್ನು ರೂಪಿಸಲು ಕ್ಯಾಂಪಸ್ ಚುನಾವಣೆಗಳು ನೆರವಾಗುತ್ತವೆ ಎಂಬ ಅಭಿಪ್ರಾಯ ಸಚಿವರದ್ದಾಗಿದೆ. ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ, ಚುನಾವಣೆಗಳನ್ನು ಮತ್ತೆ ಆರಂಭಿಸಲು ಸಚಿವರು ಯೋಚಿಸಿದ್ದಾರೆ’ ಎನ್ನುತ್ತವೆ ಇಲಾಖೆ ಮೂಲಗಳು.
ದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಕ್ಯಾಂಪಸ್ ಚುನಾವಣೆಗಳು ಈಗಲೂ ನಡೆಯುತ್ತಿವೆ. ಆದರೆ, ಜಾತಿ ಮತ್ತು ರಾಜಕೀಯ ಪಕ್ಷ ಆಧಾರಿತ ಘರ್ಷಣೆಗಳು ನಡೆಯುತ್ತವೆ ಎಂಬ ಕಾರಣಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 1989ರಿಂದ ಚುನಾವಣೆಗಳನ್ನು ನಿರ್ಬಂಧಿಸಲಾಗಿದೆ.